ಬಂಟ್ವಾಳ, ಮೇ. 30 (DaijiworldNews/AA): ಶಂಕಿತ ಡೆಂಗ್ಯೂ ಜ್ವರಕ್ಕೆ ತಾಲೂಕಿನ ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟಿನ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ಘಟನೆ ಮೇ 30 ರಂದು ವರದಿಯಾಗಿದೆ.

ಕಿನ್ನಿಬೆಟ್ಟು ನಿವಾಸಿ ಗೋಪಾಲ ಗೌಡ ಅವರ ಪುತ್ರ ಹಿತೇಶ್(17) ಮೃತ ವಿದ್ಯಾರ್ಥಿ.
ಹಿತೇಶ್ ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮೂಲಗಳ ಪ್ರಕಾರ, ಜ್ವರದಿಂದ ಹಿತೇಶ್ ಅವರಿಗೆ ಪ್ಲೇಟ್ಲೇಟ್ ಕಡಿಮೆಯಾಗಿತ್ತು. ಪ್ರಾಥಮಿಕ ವರದಿಯ ಪ್ರಕಾರ ಹಿತೇಶ್ ಸಾವಿಗೆ ಡೆಂಗ್ಯೂ ಕಾರಣ ಎನ್ನಲಾಗಿದೆ.
ಈ ಘಟನೆಯ ಬೆನ್ನಲ್ಲೇ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಜಾಗರೂಕರಾಗಿರಲು ಮನವಿ ಮಾಡಿದ್ದಾರೆ. "ನಿಂತ ನೀರು ಸೇರಿದಂತೆ ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳನ್ನು, ವಿಶೇಷವಾಗಿ ಮನೆಗಳ ಸುತ್ತಲೂ ನೀರು ನಿಲ್ಲದಂತೆ ನಿವಾಸಿಗಳು ಕ್ರಮ ಕೈಗೊಳ್ಳಬೇಕು" ಎಂದು ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಠಾತ್ ತೀವ್ರ ಜ್ವರ, ತೀವ್ರ ತಲೆನೋವು, ಮೈ ಕೈ ನೋವು ಮತ್ತು ಚರ್ಮದ ದದ್ದುಗಳಂತಹ ಡೆಂಗ್ಯೂ ಲಕ್ಷಣಗಳ ಬಗ್ಗೆ ನಿಗಾವಹಿಸುವಂತೆ ಅಧಿಕಾರಿಗಳು ಜನರಿಗೆ ಸಲಹೆ ನೀಡಿದ್ದಾರೆ. ಸಮಯೋಚಿತ ಚಿಕಿತ್ಸೆಯು ಪ್ರಾಣಾಪಾಯ ತಡೆಗಟ್ಟುವಲ್ಲಿ ನಿರ್ಣಾಯಕವಾಗಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಪ್ರದೇಶದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳ ಹಿನ್ನೆಲೆಯಲ್ಲಿ, ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಸ್ಥಳೀಯ ಆಡಳಿತಗಳು ಫಾಗಿಂಗ್ ಕಾರ್ಯಾಚರಣೆಗಳು ಮತ್ತು ಜಾಗೃತಿ ಅಭಿಯಾನಗಳನ್ನು ತೀವ್ರಗೊಳಿಸಿವೆ.