ಮಂಗಳೂರು, ಮೇ. 30 (DaijiworldNews/AA): ಮಂಗಳೂರು ಲೋಕಾಯುಕ್ತ ಅಧಿಕಾರಿಗಳಿಗೆ ಲಂಚದ ಆಮಿಷ ಒಡ್ಡಿದ ಆರೋಪದ ಮೇಲೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ವಿ ಎಡಕೆ ವಿರುದ್ಧ ಮಂಗಳೂರು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಲಂಚ ಪ್ರಕರಣವನ್ನು ದಾಖಲಿಸಿದ್ದಾರೆ.

ವರದಿಯ ಪ್ರಕಾರ, ಈ ಘಟನೆ ಮೇ 30 ರಂದು ಬೆಳಿಗ್ಗೆ 11:15 ರ ಸುಮಾರಿಗೆ ಸಂಭವಿಸಿದೆ. ಮಂಗಳೂರಿನ ಕೋಟೆಕಣಿಯ ಪ್ರಶಾಂತ್ ಆಯಿಲ್ ಇಂಡಸ್ಟ್ರಿಸ್ನ ಮಾಲೀಕರಾದ ಪ್ರವೀಣ್ ನಾಯ್ಕ್, ಗಜೇಂದ್ರ ಅವರೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಕರ್ನಾಟಕ ಲೋಕಾಯುಕ್ತದ ಪೊಲೀಸ್ ಇನ್ಸ್ಪೆಕ್ಟರ್ ಆದ ದೂರುದಾರರಿಗೆ ಮಾಹಿತಿ ನೀಡಬೇಕು ಎಂಬುದಾಗಿ ಠಾಣೆಯ ಸಿಬ್ಬಂದಿಯವರಲ್ಲಿ ತಿಳಿಸಿದ್ದಾರೆ.
ಸಂವಾದದ ಸಮಯದಲ್ಲಿ, ಗಜೇಂದ್ರ ಅವರು ತನ್ನ ವಿರುದ್ಧ ಹಾಗೂ ತನ್ನ ಇಲಾಖೆಯ ವಿರುದ್ಧ ಲೋಕಾಯುಕ್ತ ಸಂಸ್ಥೆಯಿಂದ ಯಾವುದೇ ಪ್ರಕರಣ ದಾಖಲಿಸಬಾರದು ಅಥವಾ ದಾಳಿ ಮಾಡಬಾರದು ಎಂಬುದಾಗಿ ತಿಳಿಸಿ ತಾನು 3 ತಿಂಗಳಿಗೊಮ್ಮೆ 25,000 ರೂ. ಹಣವನ್ನು ಲಂಚವಾಗಿ ಮಂಗಳೂರು ಲೋಕಾಯುಕ್ತ ಠಾಣೆಗೆ ನೀಡುವುದಾಗಿ ದೂರುದಾರರಿಗೆ ಲಂಚದ ಆಮಿಷ ಒಡ್ಡಿರುತ್ತಾರೆ. ಲಂಚದ ಈ ಪ್ರಸ್ತಾಪವನ್ನು ಕಾನೂನುಬಾಹಿರ ಪ್ರೇರಣೆ ಎಂದು ಪರಿಗಣಿಸಲಾಗಿದ್ದು, ಗಜೇಂದ್ರ ವಿರುದ್ಧ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ನಂತರ, ಮಂಗಳೂರು ಲೋಕಾಯುಕ್ತ ಠಾಣೆಯ ಠಾಣಾಧಿಕಾರಿಯವರಿಗೆ ಲಂಚ ಹಣ ನೀಡುವುದಾಗಿ ಆಮಿಷ ಒಡ್ಡಿದ ಆರೋಪದ ಮೇಲೆ ಸರ್ಕಾರಿ ಅಧಿಕಾರಿಯಾದ ಗಜೇಂದ್ರ ವಿ. ಎಡಕೆ ಅವರನ್ನು ಮೇ 30 ರಂದು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಈ ಕಾರ್ಯಾಚರಣೆಯನ್ನು ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು (ಪ್ರಭಾರ) ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಡಾ. ಗಾನಾ ಪಿ. ಕುಮಾರ್ ಮತ್ತು ಸುರೇಶ್ ಕುಮಾರ್ ಪಿ. (ಪೊಲೀಸ್ ಉಪಾಧೀಕ್ಷಕರು) ಹಾಗೂ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಭಾರತಿ ಜಿ. ಮತ್ತು ಚಂದ್ರಶೇಖರ್ ಕೆ.ಎನ್. ಮತ್ತು ಸಿಬ್ಬಂದಿಗಳ ಜೊತೆ ಕಾನೂನು ಕ್ರಮ ಕೈಗೊಂಡಿರುತ್ತಾರೆ.