ಉಡುಪಿ, ಮೇ. 31 (DaijiworldNews/TA): ರೋಟರಿ ಕ್ಲಬ್ ಬ್ರಹ್ಮಾವರ, ರೋಟರಿ ಕ್ಲಬ್ ಬಾರ್ಕೂರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿ.ವಿ. ಶಿವಮೊಗ್ಗ, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಡಿಪ್ಲೋಮ ಕೃಷಿ ಮಹಾ ವಿದ್ಯಾಲಯ ಬ್ರಹ್ಮಾವರ ಸಹಯೋಗದಲ್ಲಿ ಹಲಸು ಮತ್ತು ಹಣ್ಣು ಮೇಳ ಮೇ 30ರಂದು ಆರಂಭವಾಗಿದ್ದು, ಜೂನ್ 1ರ ತನಕ ಬ್ರಹ್ಮಾವರದ ಎಸ್ಎಮ್ಎಸ್ ಸಮುದಾಯ ಭವನದಲ್ಲಿ ನಡೆಯಲಿದೆ.


ಬ್ರಹ್ಮಾವರ ರೋಟರಿ ಕ್ಲಬ್ ಮತ್ತು ಬಾರ್ಕೂರು ರೋಟರಿ ಕ್ಲಬ್ ಗಳು ಜಂಟಿಯಾಗಿ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3182ರ ಝೋನ್ 3ರ ಅಡಿಯಲ್ಲಿ “ದ ಮ್ಯಾಜಿಕ್ ಆಫ್ ರೋಟರಿ” ಎಂಬ ಶೀರ್ಷಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮವು 100ಕ್ಕೂ ಹೆಚ್ಚು ಸ್ಟಾಲ್ ಗಳಲ್ಲಿ ವಿವಿಧ ಹಣ್ಣು ಆಧಾರಿತ ಉತ್ಪನ್ನಗಳು, ವಿಶೇಷವಾಗಿ ಹಲಸಿನ ಹಣ್ಣು ಉತ್ಪನ್ನಗಳು ಪ್ರದರ್ಶನಗೊಂಡಿದ್ದು, ಭಾರಿ ಜನಪ್ರವಾಹವನ್ನು ಸೆಳೆಯುತ್ತಿದೆ.
ಈ ಮೇಳದಲ್ಲಿ ಹಣ್ಣುಗಳೊಂದಿಗೆ ವಿವಿಧ ಗಿಡಗಳು, ಹಾಗೂ ಇತರೆ ಉತ್ಪನ್ನಗಳೂ ಪ್ರದರ್ಶನಕ್ಕೆ ಇಡಲಾಗಿದೆ. ಇದೇ ಸಂದರ್ಭದಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸಭಾ ಕಾರ್ಯಕ್ರಮವನ್ನು ರೋಟರಿ ಡಿಸ್ಟ್ರಿಕ್ಟ್ 3182ರ ಗವರ್ನರ್ ರೋಟರಿ ಸಿಎ ದೇವಾನಂದ ಅವರು ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಈ ಮೇಳ ಈಗಾಗಲೇ ಆರಂಭವಾಗಿದೆ ಮತ್ತು ಜನರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಇದು ನಿಜಕ್ಕೂ ಒಂದು ಉತ್ಸವದಂತಿದೆ ಎಂದು ತಿಳಿಸಿದರು.
ಇದೇ ಸಂದರ್ಭ ಪ್ರಸಿದ್ಧ ತರಬೋಜು ಕೃಷಿಕ ಹಾಗೂ ಉದ್ಯಮಿ ಸದಾಶಿವ ಪಾಟೀಲ ಪಾಂಡೇಶ್ವರ ಅವರನ್ನು ಸನ್ಮಾನಿಸಲಾಯಿತು. ಹಲಸಿನ ಹಣ್ಣು ಉತ್ಪನ್ನಗಳಲ್ಲಿ ಪರಿಣತಿ ಪಡೆದ ಜಯಶ್ರೀ ಅವರಿಗೂ ಸನ್ಮಾನ ಜರುಗಿತು. ಬ್ರಹ್ಮಾವರ ರೋಟರಿ ಅಧ್ಯಕ್ಷ ಶ್ರೀಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಸುಧೀರ್ ಕಾಮತ್ ಕೆ.ವಿ.,TAPCMS ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಸೈಂಟ್ ಮೇರೀಸ್ ಚರ್ಚ್ ಧರ್ಮಗುರು ರೆ. ಫಾ. ಎಮ್.ಸಿ. ಮಥಾಯ, ರೋಟರಿ ಅಸಿಸ್ಟೆಂಟ್ ಗವರ್ನರ್ ಎಮ್.ರಾಘವೇಂದ್ರ ಸಾಮಗ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.