ಕುಂದಾಪುರ, ಜೂ. 01 (DaijiworldNews/AA): ಕೋಟಾ ಪೊಲೀಸರಿಗೆ ಲಭ್ಯವಾದ ಮಾಹಿತಿ ಆಧರಿಸಿ, ಸ್ಥಳೀಯ ವಾಟ್ಸಾಪ್ ಗ್ರೂಪ್ವೊಂದರಲ್ಲಿ ಹಂಚಿಕೆಯಾದ ಪ್ರಚೋದನಕಾರಿ ಸಂದೇಶ ಮತ್ತು ವೀಡಿಯೊ ಕುರಿತು ಕ್ರಮ ಕೈಗೊಳ್ಳಲಾಗಿದೆ.

ಪರಿಶೀಲನೆಯ ನಂತರ, ಈ ವೀಡಿಯೊದಲ್ಲಿ ಫರಂಗಿಪೇಟೆಯ ರಿಯಾಜ್ ಎಂಬಾತ ಕಾಣಿಸಿಕೊಂಡಿದ್ದಾರೆ. ಆತ ಈ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ 2021 ರಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿತ್ತು.
ಕೋಮುಗಲಭೆ ಕೆರಳಿಸುವ ಉದ್ದೇಶದಿಂದ ಇದೇ ವೀಡಿಯೊವನ್ನು ಇತ್ತೀಚೆಗೆ ಹಂಚಿಕೊಂಡಿದ್ದು, ಇದನ್ನು ಬಾರಿಕೆರೆಯ ರಾಘವೇಂದ್ರ ಕಾಂಚನ್ ಪೋಸ್ಟ್ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರ ಪ್ರಕಾರ, ಈ ವಿಷಯ ಸ್ಥಳೀಯ ಹಿಂದೂ ಯುವಕರನ್ನು ಪ್ರಚೋದಿಸಿ ಕೋಮು ಸೌಹಾರ್ದತೆಗೆ ಭಂಗ ತರುವ ಉದ್ದೇಶವನ್ನು ಹೊಂದಿತ್ತು.
ಈಗ ರಾಘವೇಂದ್ರ ಕಾಂಚನ್ ವಿರುದ್ಧ ಕೋಟಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 108/2025 ರ ಅಡಿಯಲ್ಲಿ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 196 ಮತ್ತು 56 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ರಾಘವೇಂದ್ರ ಕಾಂಚನ್ ವಿರುದ್ಧ ಇದೇ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಪ್ರಕರಣ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ಈಗಾಗಲೇ ದಾಖಲಾಗಿರುತ್ತದೆ. ಆತನನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎನ್ನಲಾಗಿದೆ.