ವಿಟ್ಲ, ಜೂ. 01 (DaijiworldNews/TA): ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ನೇತೃತ್ವದಲ್ಲಿ 4 ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮಾಣಿಲ ಗ್ರಾಮದ ಸುಮಾರು 150 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮತ್ತು ಹತ್ತನೇ ತರಗತಿಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮ ಗಣ್ಯರ ಸಮ್ಮುಖದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರ ನಿರ್ಮಾಣ ಕಾರ್ಯ ನಮ್ಮೆಲ್ಲರ ಜವಾಬ್ದಾರಿ, ಶಿಕ್ಷಣ ಕ್ರಾಂತಿಯ ಜೊತೆಗೆ ಸಾಮಾಜಿಕ, ಧಾರ್ಮಿಕವಾಗಿ ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘವು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಸಾಮಾಜಿಕ ಕಾರ್ಯಕರ್ತರು ಮಾತೃಭೂಮಿಯ ವೇದಿಕೆಯ ಮಾರ್ಗದರ್ಶಕರು ಆಗಿರುವ ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದರು. ಅವರು ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವ ಇಲ್ಲಿ ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಇವರು ಆಯೋಜಿಸಿರುವ ಉಚಿತ ಪುಸ್ತಕ ವಿತರಣಾ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣಕ್ಕೆ ಬೇಕಾದ ಕೆಲವೊಂದು ಪರಿಕರಗಳನ್ನು ಈ ಸಂಘಟನೆ ನೀಡುತ್ತಿದ್ದು ಅದನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಮಾಡಬೇಕು, ಕಾಶ್ಮೀರದ ಘಟನೆಯನ್ನು ಮೆಲುಕು ಹಾಕಿ ಸಮಾಜದ ಶಾಂತಿ ಸುವ್ಯವಸ್ಥೆಗೆ ನಾವೆಲ್ಲರೂ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರು ಆದ ದಯಾನಂದ ನಾಯಕ್ ರವರು ಮಾತನಾಡಿ ಮಕ್ಕಳು ಕೇವಲ ಮೊಬೈಲ್ ಬಳಕೆಗೆ ಮಾತ್ರ ಒಳಗಾಗದೆ ಜೀವನದಲ್ಲಿ ಬದಲಾವಣೆ ಅಗತ್ಯ ನಿಂತ ನೀರಾಗಬಾರದು ಹರಿಯುವ ನೀರಾಗಬೇಕು ಎಂದು ಮಕ್ಕಳಿಗೆ ಹುರಿದುಂಬಿಸುವುದರ ಜೊತೆಗೆ ಮಕ್ಕಳು ಜೀವನದಲ್ಲಿ ಪರಿಶ್ರಮದ ಮುಖಾಂತರ ಗೆಲ್ಲಬೇಕು ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತೃಭೂಮಿ ಯುವ ವೇದಿಕೆಯ ಅಧ್ಯಕ್ಷರಾದ ಜಿತೇಶ್ ಕುಮಾರ್ ದಂಡೆಪ್ಪಾಡಿ ಅವರು ವಹಿಸಿದರು.
ಈ ಸಂದರ್ಭದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕ್ ಪ್ರೇರಿತ ದಾಳಿಯಲ್ಲಿ ಮಡಿದ 27 ಮಂದಿ ಸಹೋದರರ ಹಾಗೂ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ನಮ್ಮಯೋಧರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಇಲ್ಲಿನ ಎಸ್ ಎಸ್ ಎಲ್ ಸಿ ಯಲ್ಲಿ ಮಹತ್ತರ ಸಾಧನೆಗೈದ ಸರಕಾರಿ ಪ್ರೌಢ ಶಾಲೆ ಮಾಣಿಲ ಇಲ್ಲಿನ ವಿದ್ಯಾರ್ಥಿನಿಯರಾದ ಕು| ಶೈನಾ ಲಿಶಾ ಮೊಂತೆರೋ, ಕು| ಆಶಿಕಾ ಯಸ್ ಹಾಗೂ ಕು| ವರ್ಷಾ ಇವರನ್ನು ಸನ್ಮಾನಿಸಲಾಯಿತು.
ಕು| ಮನ್ವಿ ಭಟ್ ಇವರು ವೈಯಕ್ತಿಕ ಗೀತೆಯನ್ನು ಹಾಡಿದರು. ಸಂಘದ ಸಹ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕೊಂಕೋಡು ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಸದಸ್ಯರಾದ ಮಿಥುನ್ ಕುಮಾರ್ ಮಾಣಿಲ ಇವರು ಸ್ವಾಗತಿಸಿ, ಉಪಾಧ್ಯಕ್ಷರಾದ ಸುದೇಶ್ ಮಾಣಿಲ ವಂದಿಸಿದರು. ಕು| ಸ್ಮಿತಾ ಮತ್ತು ಕು| ತೀರ್ಥನಾ ಪ್ರಾರ್ಥಿಸಿ, ಕು| ಹಿತಾಶ್ರೀ ಮತ್ತು ಕು| ಶ್ರೇಯಾ ಚೌಟ ವಂದೇಮಾತರಂ ಹಾಡಿದರು. ಸಂಘದ ಸದಸ್ಯೆ ಶ್ರೀಮತಿ ನಳಿನಾಕ್ಷಿ ಇವರು ಕಾರ್ಯಕ್ರಮ ನಿರೂಪಿಸಿದರು.