ಮಂಗಳೂರು, ಜೂ. 01 (DaijiworldNews/TA): ನಿಟ್ಟೆಯ ಎ.ಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆ ಇದರ ಮೌಖಿಕ ಹಾಗೂ ಮುಖದ ಪಥೋಲಾಜಿ ಮತ್ತು ಮೌಖಿಕ ಸೂಕ್ಷ್ಮಜೀವಶಾಸ್ತ್ರ ವಿಭಾಗವು ವಿಶ್ವ ತಂಬಾಕು ವಿರೋಧಿ ದಿನವನ್ನು ಆವಿಷ್ಕಾರ್ ಸಭಾಂಗಣದಲ್ಲಿ ನಡೆಯಿತು. ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಕುರಿತ ಉದ್ಯಮದ ತಂತ್ರಗಳ ಬಹಿರಂಗಗೊಳಿಸುವಿಕೆ” ಎಂಬ ವಿಚಾರದ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಕ್ಷೇಮದ ರೇಡಿಯೋಕಿರಣ ಚಿಕಿತ್ಸಾ ಮತ್ತು ಆಂಕೋಲಾಜಿ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಕೃಷ್ಣ ಶರಣ್ ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಕುರಿತು ಮಾತನಾಡಿ, ಎರಡನೇ ದೊಡ್ಡ ಸಂಖ್ಯೆಯಾಗಿ ತಂಬಾಕು ಸೇವನೆ ನಡೆಸುವವರ ಸಂಖ್ಯೆ ಭಾರತದಲ್ಲಿದೆ. ಶೇ.30 ಮಂದಿ ಸಿಗರೇಟು ಸೇವಿಸುವವರಾದರೆ, ಶೇ.10 ಮಂದಿ ಮಾದಕ ದ್ರವ್ಯ ಸೇವಿಸವವರೇ ಆಗಿದ್ದಾರೆ. ವಿದ್ಯಾರ್ಥಿಗಳು ತಮ್ಮೊಳಗೆ ಹಾಗೂ ಸಾಮಾಜಿಕವಾಗಿ ಜಾಗೃತಿ ಮೂಡಿಸಬೇಕಿದೆ ಎಂದರು.
ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಪ್ರೊ. ಡಾ. ಮಿತ್ರ ಎನ್. ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮನೆಯಲ್ಲೇ ಅರಿವು ಮೂಡಿಸುವ ಕಾರ್ಯಗಳಾಗಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ತಂಬಾಕು ವಿರೋಧಿ ಜಾಗೃತಿ ಕಾಲೇಜಿನಿಂದಲೇ ಆರಂಭಿಸಲಾಗಿದೆ. ಅದಕ್ಕಾಗಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದ ಸಂಯೋಜಕರಾಗಿ ಡಾ. ಪ್ರೀತೇಶ್ ಶೆಟ್ಟಿ ಕಾರ್ಯ ನಿರ್ವಹಿಸಿದರು. ಉಪಪ್ರಾಂಶುಪಾಲರಾದ ಪ್ರೊ. ಎಂ. ಎಸ್. ರವಿ ಹಾಗೂ ಪಥೋಲಾಜಿ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಲತಾ ಎಸ್.ವಿ. ಉಪಸ್ಥಿತರಿದ್ದರು. ತಂಬಾಕು ಮುಕ್ತ ಸಮಾಜ ನಿರ್ಮಾಣದಲ್ಲಿ ಉತ್ಸಾಹದೊಂದಿಗೆ ಸಹಭಾಗಿಯಾಗಬೇಕೆಂಬ ಸಂದೇಶ ಕಾರ್ಯಕ್ರಮದ ಮೂಲಕ ಹರಡಲಾಯಿತು.