ಬಂಟ್ವಾಳ,ಜೂ. 01 (DaijiworldNews/AK): ಸಮಯಪ್ರಜ್ಞೆಯ ಕಾರ್ಯವೈಖರಿಯನ್ನು ಪ್ರೋತ್ಸಾಹಿಸಿ ರೈಲ್ವೆ ಇಲಾಖೆಯ ಅಧಿಕಾರಿಗಳು ಬಂಟ್ವಾಳದ ಮಾಣಿ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಬಾಬು ಶೆಟ್ಟಿ ತೋಟ ಅವರಿಗೆ ಸನ್ಮಾನ ಮಾಡಿದೆ.

ವಾಯುಭಾರ ಕುಸಿತದ ಭಾರಿ ಗಾಳಿ ಮಳೆಗೆ ಮೇ 26 ರಂದು ಸಂಜೆ ವೇಳೆ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ರೈಲ್ವೆ ಟ್ರ್ಯಾಕ್ ಗೆ ಮರಬಿದ್ದು ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಬಾಬು ಶೆಟ್ಟಿ ಅವರ ಮನೆ ಕೂಡ ಅಲ್ಲೇ ಹತ್ತಿರವಿದ್ದು ಅದೇ ಸಮಯದಲ್ಲಿ ಕಾಲು ದಾರಿ ಮೂಲಕ ಮಾಣಿಗೆ ಹೋಗುತ್ತಿದ್ದ ಬಾಬು ಶೆಟ್ಟಿ ತೋಟ ಅವರು ಅಪಾಯವನ್ನು ತಪ್ಪಿಸಲು ಮುಂದಾಗಿ ಕೂಡಲೇ ಪುತ್ತೂರು ರೈಲ್ವೆ ಇಲಾಖೆಗೆ ಪೋನ್ ಮಾಡಿ ವಿಚಾರ ತಿಳಿಸಿದರು.
ಕೂಡಲೇ ಕಾರ್ಯಪ್ರವೃತ್ತರಾದ ಪುತ್ತೂರು ರೈಲ್ವೆ ಇಲಾಖೆಯ ಅಧಿಕಾರಿಗಳು ಅಪಾಯಕಾರಿ ಸನ್ನಿವೇಶದಲ್ಲಿ ಬಿ.ಸಿ.ರೋಡಿನಿಂದ ಹಾಗೂ ಪುತ್ತೂರು ಕಡೆಯಿಂದ ಬರುವ ರೈಲುಗಳನ್ನು ತಡೆ ಹಿಡಿದರು. ಸ್ಥಳಕ್ಕೆ ಧಾವಿಸಿ ಮರಗಳನ್ನು ತೆರವುಗೊಳಿಸಿದ ಬಳಿಕ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಜೊತೆಗೆ ನೂತನವಾಗಿ ಕಾಮಗಾರಿ ಹಂತದಲ್ಲಿರುವ ರೈಲ್ವೆ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಕೂಡ ಕಡಿದು ಬಿದ್ದಿದೆ. ಘಟನೆಯಿಂದ ಬಾರಿ ದೊಡ್ಡ ಅನಾಹುತ ತಪ್ಪಿಸದಕ್ಕೆ ಬಾಬು ಶೆಟ್ಟಿ ಅವರನ್ನು ಕರೆದು ಪುತ್ತೂರು ಕಚೇರಿಯಲ್ಲಿ ಸನ್ಮಾನ ಮಾಡಿದ್ದಾರೆ. ಇವರ ಕಾರ್ಯದಕ್ಷತೆ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.