ಕಾರ್ಕಳ, ಜೂ. 02 (DaijiworldNews/AA): ಕುಡಿಯುವ ನೀರಿಗಾಗಿ ಆಡಳಿತ ಬಿಜೆಪಿಯ ಹಾಗೂ ಪ್ರತಿಪಕ್ಷ ಕಾಂಗ್ರೆಸ್ಸಿನ ಇಬ್ಬರು ಮಹಿಳಾ ಕೌನ್ಸಿಲರ್ಗಳು ಕಾರ್ಕಳ ಮುಖ್ಯಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಧರಣಿಯಲ್ಲಿ ನಡೆಸಿದರು.

ಕಾರ್ಕಳ ಪುರಸಭಾ 2ನೇ ವಾರ್ಡ್ನ ಕಾಂಗ್ರೆಸ್ ಸದಸ್ಯರಾಗಿರುವ ಪುರಸಭೆಯ ಮಾಜಿ ಅಧ್ಯಕ್ಷೆ ಪ್ರತಿಮಾ ಹಾಗೂ 3ನೇ ವಾರ್ಡ್ನ ಬಿಜೆಪಿ ಸದಸ್ಯೆ ನೀತಾ ಆಚಾರ್ ಅವರು ನೀರಿಗಾಗಿ ಧರಣಿ ನಡೆಸಿದ್ದಾರೆ.
ಕಳೆದ 20 ದಿನಗಳಿಂದ 2 ಹಾಗೂ 3ನೇ ವಾರ್ಡ್ಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗದೇ ಅಲ್ಲಿನ ನಾಗರಿಕರ ಜೀವನ ಸಾಗಿಸುವುದಕ್ಕೂ ತ್ರಾಸದಾಯವಾಗಿದೆ. 2 ಹಾಗೂ 3ನೇ ವಾರ್ಡ್ಗಳ ಮನೆಯ ಹಿತ್ತಲುಗಳಲ್ಲಿ ಬಾವಿಗಳು ಇಲ್ಲದೇ ಇರುವುದು ಹಾಗೂ ಪುರಸಭೆಯಿಂದ ಸರಬರಾಜು ಆಗುವ ಕುಡಿಯುವ ನೀರನ್ನೇ ಆಶ್ರಯಿಸಿಕೊಂಡಿದ್ದಾರೆ.
ರಾಮಸಮುದ್ರದಿಂದ ಎಕ್ಸ್ಪ್ರೆಸ್ ಲೈನ್ ಮೂಲಕ ಬಂಡೀಮಠ ಟ್ಯಾಂಕ್ಗೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಇದೆ. ಕಳೆದ ಕೆಲ ದಿನಗಳ ಹಿಂದೆ ನಗರದ ಕೋರ್ಟ್ ರಸ್ತೆಯಲ್ಲಿ ಅಮೃತಯೋಜನೆಗಾಗಿ ರಸ್ತೆಯ ಒಂದು ಪಾರ್ಶ್ವವನ್ನು ಅಗೆದು ಪೈಪ್ ಜೋಡಣೆ ಮಾಡುವ ಸಂದರ್ಭದಲ್ಲಿ ಬಂಡೀಮಠಕ್ಕೆ ಹಾದು ಹೋಗಲಾಗಿದ್ದ ಎಕ್ಸ್ಪ್ರೆಸ್ ಪೈಪ್ಲೈನ್ಗೆ ಹಾನಿಯಾಗಿರುವುದರಿಂದ ಎಕ್ಸ್ಪ್ರೆಸ್ ಪೈಪ್ನಲ್ಲಿ ನೀರು ಸರಬರಾಜು ಆಗದೇ ಹೋದುದರಿಂದ 2 ಹಾಗೂ 3ನೇ ವಾರ್ಡ್ನ ನಾಗರಿಕರು ತೀರಾ ಸಂಕಷ್ಟ ಎದುರಿಸುವಂತಾಗಿತ್ತು.
ಯೋಜನೆ ಹಾಗೂ ಯೋಚನೆ ಇವೆರಡು ಇಲ್ಲದೇ ಆಮೆಗತಿಯಲ್ಲಿ ಅಮೃತ ಯೋಜನೆಯ ಪೈಪ್ಲೈನ್ ಅಳವಡಿಸುತ್ತಿರುವ ಕಾಮಗಾರಿ ಒಂದೆಡೆಯಲ್ಲಿ ನಡೆಯುತ್ತಿದ್ದರೆ, ನಿರ್ಲಕ್ಷ್ಯ ಕಾಮಗಾರಿಯಿಂದ ಭೂತಳ ಭಾಗದಲ್ಲಿ ಹಾದು ಹೋಗಿದ್ದ ಕುಡಿಯುವ ನೀರಿನ ಪೈಪ್ ಹಾನಿಯಾದರೂ ಅದರ ದುರಸ್ಥಿಗೆ ಅಮೃತಯೋಜನೆಯ ಕಾಮಗಾರಿ ವಹಿಸಿಕೊಂಡಿರುವ ಕಂಟ್ರಾಕ್ಟರ್ ಜವಾಬ್ದಾರಿ ವಹಿಸುತ್ತಿಲ್ಲ.