ಉಳ್ಳಾಲ, ಜೂ.03 (DaijiworldNews/TA): ತಾಲ್ಲೂಕಿನ ಮಂಜನಾಡಿ ಗ್ರಾಮದ ಉರುಮನೆ ಕೋಡಿಯಲ್ಲಿ ಮೇ 30ರಂದು ಸಂಭವಿಸಿದ ದುರಂತಕ್ಕೆ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣವಾಗಿದೆ. ಹಲವು ವರ್ಷಗಳಿಂದ ಮನೆ ಇದ್ದರೂ ಸಂಭವಿಸದ ದುರಂತ ರಸ್ತೆ ನಿರ್ಮಾಣವಾದ ಬಳಿಕ ನಡೆಯಲು ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣ' ಎಂದು ಮೃತಪಟ್ಟ ಮಕ್ಕಳ ತಂದೆ ಸೀತಾರಾಮ ಪೂಜಾರಿ ಅವರು ರಾಜ್ಯದ ಮುಖ್ಯಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.

ಸೀತಾರಾಂ ಅವರ ತಾಯಿ ಪ್ರೇಮಾ ಪೂಜಾರಿ, ಮಕ್ಕಳಾದ ಆರ್ಯನ್, ಆರುಷ್ ಗುಡ್ಡ ಕುಸಿದು ಮೃತಪಟ್ಟಿದ್ದಾರೆ. ಅವರ ಜೊತೆಗೆ ಸೀತಾರಾಮ್ ಅವರ ಪತ್ನಿ ಅಶ್ವಿನಿ ಅವರ ಎರಡೂ ಕಾಲುಗಳು ಮತ್ತು ತಂದೆ ಕಾಂತಪ್ಪ ಪೂಜಾರಿ ಅವರ ಒಂದು ಕಾಲು ತುಂಡರಿಸಲಾಗಿದೆ. ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಮಂಜೂರಾದ ₹ 20 ಲಕ್ಷದ ಎಸ್. ಟಿ.ಕಾಲೊನಿ ಸಿಸಿ ರಸ್ತೆ ಕಾಮಗಾರಿ ಅವಘಡಕ್ಕೆ ಕಾರಣವಾಗಿದೆ. KRDIL ಮಂಗಳೂರು ಘಟಕದಿಂದ ನಿರ್ಮಾಣವಾದ ಈ ರಸ್ತೆಯ ಕಾಮಗಾರಿಯ ಸಂದರ್ಭ ಗುಡ್ಡದಿಂದ ಮಣ್ಣು ತೆಗೆಯುವಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಭೂವೈಜ್ಞಾನಿಕ ಪರೀಕ್ಷೆ ನಡೆಸಿಲ್ಲ. ಮರಗಳಿದ್ದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಅಗತ್ಯವಾಗಿತ್ತು. ಆದರೆ, ಈ ಸುರಕ್ಷತಾ ಮಾನದಂಡಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಮ ಪಂಚಾಯಿತಿ, ಜಿಲ್ಲಾ ಮಟ್ಟದ ಎಂಜಿನಿಯರಿಂಗ್ ವಿಭಾಗ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣವಾಗಿದೆ. ಸೂಕ್ತ ಯೋಜನೆ, ತಾಂತ್ರಿಕ ಮೌಲ್ಯಮಾಪನ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದರೆ ಈ ದುರಂತ ತಡೆಯಬಹುದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಗೆ ಕಾರಣರಾದ ಎಂಜಿನಿಯರ್ ಗಳು, ಗ್ರಾ. ಪಂ. ಅಧಿಕಾರಿಗಳು, KRDIL ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಇದಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಮತ್ತು ಎಂಜಿನಿಯರಿಂಗ್ ವಿಭಾಗದ ಉನ್ನತ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ತನಿಖೆ ನಡೆಸುವಂತೆ ಅವರು ವಿನಂತಿಸಿದ್ದಾರೆ.
ದುರಂತದಿಂದ ಸೀತಾರಾಮ ಅವರ ಕುಟುಂಬಕ್ಕೆ ಆದ ಹಾನಿ, ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಅವರು ಕೋರಿದ್ದಾರೆ. ಭವಿಷ್ಯದಲ್ಲಿ ಇಂಥ ದುರಂತ ಮರುಕಳಿಸದಂತೆ ಕಾನೂನು ಜಾರಿ ಮತ್ತು ಮೇಲ್ವಿಚಾರಣೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಈ ಘಟನೆಯಿಂದ ಪಾಠ ಕಲಿತು. ಜವಾಬ್ದಾರಿಯುತ ಆಡಳಿತ ಮತ್ತು ಸುರಕ್ಷಿತ ಕಾಮಗಾರಿಗಳನ್ನು ಖಾತ್ರಿಪಡಿ ಸುವುದು ಇಂದಿನ ಅಗತ್ಯವಾಗಿದೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶಿಸಿ, ಕಾನೂನು ಕ್ರಮ ಕೈಗೊಂಡು, ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.