ಉಡುಪಿ, ಜೂ. 03 (DaijiworldNews/AA): ಅಕ್ರಮ ಮಟ್ಕಾ ಜೂಜಾಟದ ವಿರುದ್ಧ ಮಹತ್ವದ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾ ಪೊಲೀಸರು, ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 12 ಮಂದಿ ಆರೋಪಿಗಳನ್ನು ಬಂಧಿಸಿ, 12 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಆಪರೇಟರ್ ಓರ್ವನನ್ನು ಬಂಧಿಸಲಾಗಿತ್ತು. ಬಂಧಿತ ಬುಕ್ಕಿ ನೀಡಿದ ಮಾಹಿತಿಯ ಆಧಾರದಲ್ಲಿ ಜೂಜಾಟದ ಜಾಲದ ಕುರಿತು ವ್ಯಾಪಕ ತನಿಖೆ ನಡೆಸಲಾಯಿತು.
ಬಂಧಿತರನ್ನು ಹಿರಿಯಡ್ಕದ ಬೊಮ್ಮರಬೆಟ್ಟುವಿನ ಮೂಡಬೆಟ್ಟು ನಿವಾಸಿ ಪ್ರಕಾಶ್ ಮೂಲ್ಯ (43), ಮಲ್ಪೆ ಕೊಡವೂರು ಗ್ರಾಮದ ನಿವಾಸಿ ರತ್ನಾಕರ್ ಅಮೀನ್ (48), ಉಡುಪಿ ತಾಲೂಕಿನ ಬಡಗುಬೆಟ್ಟು ಗ್ರಾಮದ ಇಂದಿರಾ ನಗರ ನಿವಾಸಿ ನಾಗೇಶ್ (56), ಬ್ರಹ್ಮಾವರ ತಾಲೂಕಿನ ಕಾರ್ಕಡ ನಿವಾಸಿ ವಿಜಯ ನಾಯರಿ (50), ಚೇರ್ಕಾಡಿಯ ಪೇತ್ರಿ ನಿವಾಸಿ ದಿವಾಕರ ಪೂಜಾರಿ (42), ಮೂಡನಿದಂಬೂರು ಶಿರಿಬೀಡು ಮಠದಬೆಟ್ಟು ನಿವಾಸಿ ರಾಮರಾಜ್ (44), ಕುಂಜಿಬೆಟ್ಟು ಮೂಡಸಗ್ರಿ ನಿವಾಸಿ ಜಗದೀಶ್ (39), ಕೊಪ್ಪಳ ಮೂಲದ ಪ್ರಸ್ತುತ ಅಂಬಾಗಿಲು ನಿವಾಸಿ ಚಿದಾನಂದ (35), ಕೊಡವೂರು ಮಧ್ವನಗರ ನಿವಾಸಿ ತಿಪ್ಪೆಸ್ವಾಮಿ (52), ಉಡುಪಿ ಸಂತಕಟ್ಟೆ ನಿವಾಸಿ ರಾಘವೇಂದ್ರ (41), ಪುತ್ತೂರು ನಿವಾಸಿ ಉದಯ ಎಸ್ ಭಂಡಾರಿ (45) ಮತ್ತು ಉಚ್ಚಿಲ ನಿವಾಸಿ ಮನೋಜ್ ಕುಮಾರ್ (39) ಎಂದು ಗುರುತಿಸಲಾಗಿದೆ.
ಉಡುಪಿ ನಗರ, ಮಣಿಪಾಲ, ಮಲ್ಪೆ, ಕೋಟಾ ಮತ್ತು ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
"ಸಂಘಟಿತ ಬೆಟ್ಟಿಂಗ್ ಚಟುವಟಿಕೆಗಳನ್ನು ಗುರಿಯಾಗಿಸಿಕೊಂಡು ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಟ್ಕಾ ಜೂಜಾಟದಲ್ಲಿ ಭಾಗಿಯಾಗಿರುವವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ. ಈ ಕಾರ್ಯಾಚರಣೆಯಿಂದ ಈಗಾಗಲೇ 12 ಮಂದಿ ಬಂಧಿತರಾಗಿದ್ದಾರೆ, ಮತ್ತು ಹೆಚ್ಚಿನ ಕ್ರಮಗಳು ಕೈಗೊಳ್ಳಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಉಡುಪಿ ಜಿಲ್ಲೆಯಿಂದ ಎಲ್ಲಾ ರೀತಿಯ ಅಕ್ರಮ ಜೂಜಾಟವನ್ನು ನಿರ್ಮೂಲನೆ ಮಾಡಲು ನಾವು ಬದ್ಧರಾಗಿದ್ದೇವೆ. ಮಟ್ಕಾ ಅಥವಾ ಇದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಮುಂದುವರಿಸಲಾಗುವುದು" ಎಂದು ಅವರು ತಿಳಿಸಿದ್ದಾರೆ.
ಇನ್ನು ಇಂತಹ ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ವರದಿ ಮಾಡುವಂತೆ ಪೊಲೀಸ್ ಅಧಿಕಾರಿ ತಿಳಿಸಿದ್ದು, ಮಾಹಿತಿ ನೀಡಿದವರ ಗುರುತು ಗೌಪ್ಯವಾಗಿ ಇಡಲಾಗುವುದು ಎಂದು ಭರವಸೆ ನೀಡಿದ್ದಾರೆ.