ಬಂಟ್ವಾಳ ,ಜೂ. 03 (DaijiworldNews/AK): ಹಿರಿಯ ಕಾರು ಚಾಲಕ ಕಲ್ಲಡ್ಕ ನಿವಾಸಿ ಸುಲೈಮಾನ್ (93) ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಸ್ಥಳೀಯ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಕಳೆದ 70 ವರ್ಷಗಳಿಂದ ಕಾರು ಚಾಲಕರಾಗಿ ದುಡಿದ ಶ್ರಮಜೀವಿಯಾಗಿದ್ದು, ಸ್ವಾತಂತ್ರ್ಯಾನಂತರ ಪ್ರಥಮವಾಗಿ ವಾಹನ ಚಾಲನಾ ಪರವಾನಿಗೆ ಆರಂಭವಾದ 1955 ನೇ ಇಸವಿಯಲ್ಲಿ ಚಾಲನಾ ಪರವಾನಿಗೆ ಪಡೆದಿದ್ದರು. ಅಂದಿನ ಆ ದಿನಗಳಲ್ಲಿ ಕಲ್ಲಡ್ಕದಿಂದ ಮುಂಬಯಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ ಹೆಗ್ಗಳಿಕೆ ಇವರದ್ದು.
ಕುರಾನ್ ಬಗ್ಗೆ ಅಪಾರ ತಿಳುವಳಿಕೆ ಹೊಂದಿದ ಇವರು ಅರೆಬಿಕ್ ಮತ್ತು ಮಲಯಾಳಂ ಬಾಷಾ ಜ್ಞಾನವನ್ನು ಹೊಂದಿದ್ದರು. 70 ವರ್ಷಗಳ ತಮ್ಮ ಚಾಲಕ ಸೇವಾವಧಿಯಲ್ಲಿ ಕಲ್ಲಡ್ಕ ಮ್ಯೂಸಿಯಂ ನ ಕೆ.ಎಸ್.ಯಾಸಿರ್ ಸಹಿತ ನೂರಾರು ಮಂದಿಗೆ ವಾಹನ ಚಲಾಯಿಸಲು ಕಲಿಸಿಕೊಟ್ಟವರು.
ಕಲ್ಲಡ್ಕದ ಹೆಸರಾಂತ ಕಾಂಗ್ರೆಸ್ ಮುಖಂಡ ದಿ. ಇಸ್ಮಾಯಿಲ್ ಕಲ್ಲಡ್ಕ, ಹೆಸರಾಂತ ಉದ್ಯಮಿ ದಿ.ಸೇಸಾರಿ ಶಾಫಿ ಹಾಜಿ (ಸೇಸರಾಜ್) ಅವರ ಸಹೋದರರಾಗಿರುವ ಸುಲೈಮಾನ್ ಅವರು ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.