ಮಂಗಳೂರು,ಜೂ. 03 (DaijiworldNews/AK): ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಮೇ 1 ರಂದು ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನವಾಗಿದೆ. ಬಂಧಿತ ವ್ಯಕ್ತಿಯ ಮೇಲೆ ಪ್ರಮುಖ ಆರೋಪಿಯೊಂದಿಗೆ ಕೊಲೆಗೆ ಸಂಚು ರೂಪಿಸಿದ ಮತ್ತು ಬಂಧನದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪವಿದೆ.
ಬಂಧಿತನನ್ನು ಮಂಗಳೂರು ಬಜ್ಪೆ ಶಾಂತಿಗುಡ್ಡೆಯ ಬದ್ರಿಯಾ ಜುಮಾ ಮಸೀದಿ ಬಳಿಯ ನಿವಾಸಿ ದಿವಂಗತ ಬಾವ ಅಬ್ದುಲ್ ರೆಹಮಾನ್ ಅವರ ಪುತ್ರ ಅಬ್ದುಲ್ ರಜಾಕ್ (59) ಎಂದು ಗುರುತಿಸಲಾಗಿದೆ. ಪ್ರಸ್ತುತ ಫ್ಲಾಟ್ ನಂ. 605, 313 ಅಪಾರ್ಟ್ಮೆಂಟ್, ಕೆಂಜಾರು, ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಈತ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಮುಜಮ್ಮಿಲ್ ನ ತಂದೆ ಮತ್ತು ಮತ್ತೊಬ್ಬ ಆರೋಪಿ ನೌಶಾದ್ ವಾಮಂಜೂರ್ ಅಲಿಯಾಸ್ ಚೊಟ್ಟೆ ನೌಶಾದ್ ನ ಮಾವ. ರಜಾಕ್ ತನ್ನ ನಿವಾಸದಲ್ಲಿ ಅವರ ಜೊತೆ ಮತ್ತು ಇತರ ಆರೋಪಿಗಳೊಂದಿಗೆ ಸಂಚು ರೂಪಿಸಿ ಕೊಲೆಯ ನಂತರ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಎನ್ನಲಾಗಿದೆ.
ಕೊಲೆಯ ತನಿಖೆ ಮುಂದುವರೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ.