ಕಾಸರಗೋಡು, ಜೂ. 06 (DaijiworldNews/AA): ನಿಯಂತ್ರಣ ತಪ್ಪಿ ಕಾರೊಂದು ಮಗುಚಿ ಬಿದ್ದ ಪರಿಣಾಮ ಎರಡು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಗುರುವಾರ ಸಂಜೆ ಆರು ಗಂಟೆ ಸುಮಾರಿಗೆ ಆದೂರು ಸಮೀಪದ ಮುಳ್ಳೇರಿಯ ಕಾರ್ಲೇ ಎಂಬಲ್ಲಿ ನಡೆದಿದೆ.

ಬೆಳ್ಳಿಗೆಯ ಎಂ. ಹರಿದಾಸ್ - ಶ್ರೀವಿದ್ಯಾ ದಂಪತಿ ಪುತ್ರಿ ಹೃದ್ಯಾನಂದ ಮೃತಪಟ್ಟ ಮಗು.
ಪೇಟೆಗೆ ತೆರಳಿ ಮರಳುತ್ತಿದ್ದಾಗ ಮನೆಯ ರಸ್ತೆಯಲ್ಲಿ ಕಾರು ಸ್ಟಾರ್ಟ್ ಆಗದ ಹಿನ್ನಲೆಯಲ್ಲಿ ತಳ್ಳುತ್ತಿದ್ದ ಸಂದರ್ಭದಲ್ಲಿ ಮುಂದಕ್ಕೆ ಕಾರು ಚಲಿಸಿದ ಸಂದರ್ಭ ಮಗು ಕಾರಿನಡಿಗೆ ಸಿಲುಕಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ತಾಯಿ ಎಸೆಯಲ್ಪಟ್ಟರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮನೆಗೆ ಬರುವ ಇಳಿಜಾರು ರಸ್ತೆಯಲ್ಲಿ ಮಳೆ ನೀರು ಹಾದು ಹೋಗಲು ರಸ್ತೆ ಅಡ್ಡವಾಗಿ ಚರಂಡಿ ತೋಡಿದ್ದು, ಇಲ್ಲಿ ಟಯರ್ ಸಿಲುಕಿ ಕಾರಿನ ಇಂಜಿನ್ ಆಫ್ ಆಗಿತ್ತು. ಇದರಿಂದ ತಾಯಿ ಹಾಗೂ ಮಗು ಹೃದ್ಯಾನಂದ ಕೆಳಗಿಳಿದಿದ್ದು, ಹಿರಿಯ ಮಗಳು ದೇವಾನಂದ ಕಾರಿನೊಳಗಿದ್ದಳು. ಕಾರನ್ನು ತಳ್ಳುತ್ತಿದ್ದಾಗ ಒಮ್ಮೆಲೇ ಕಾರು ಸ್ಟಾರ್ಟ್ ಆಗಿ ಮುಂದಕ್ಕೆ ಚಲಿಸಿದೆ. ಈ ವೇಳೆ ಮಗು ಕಾರಿನಡಿಗೆ ಸಿಲುಕಿ ಈ ದುರ್ಘಟನೆ ನಡೆದಿದೆ.
ಸ್ಥಳೀಯರ ನೆರವಿನಿಂದ ಹೊರತೆಗೆದು ಮುಳ್ಳೇರಿಯದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಗುವಿನ ಪ್ರಾಣ ಉಳಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈ ಬಗ್ಗೆ ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.