ಕುಂದಾಪುರ, ಜೂ. 06 (DaijiworldNews/AA): ಸಿದ್ದಾಪುರ ಅರಣ್ಯದಂಚಿನ ಗ್ರಾಮಗಳ ಜನರಲ್ಲಿ ಮೂರು ದಿನಗಳಿಂದ ಭಯ ಸೃಷ್ಟಿಸಿದ್ದ ಕಾಡಾನೆಯನ್ನು ಆರು ಕುಮ್ಕಿ ಆನೆಗಳು ಮತ್ತು 150 ಸದಸ್ಯರ ತಂಡದ ಕಾರ್ಯಾಚರಣೆಯ ಮೂಲಕ ಕೊನೆಗೂ ಸೆರೆಹಿಡಿಯಲಾಗಿದೆ.



ಸಿದ್ದಾಪುರ ಪೇಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಅಲೆದಾಡಿದ್ದ ಆನೆ, ಮೂರು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಇದರಿಂದಾಗಿ ಶಾಲೆಗಳು ಮತ್ತು ಅಂಗನವಾಡಿಗಳಿಗೆ ಅಧಿಕಾರಿಗಳು ರಜೆ ಘೋಷಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಸಂಜೆ 6:30 ರೊಳಗೆ ವ್ಯಾಪಾರ ಸಂಸ್ಥೆಗಳನ್ನು ಮುಚ್ಚುವಂತೆ ಆದೇಶಿಸಲಾಗಿತ್ತು.
ಆನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಚಿಕ್ಕಮಗಳೂರು ಎಲಿಫೆಂಟ್ ಟಾಸ್ಕ್ ಫೋರ್ಸ್ (ಇಟಿಎಫ್) ತಂಡದೊಂದಿಗೆ ಕುದುರೆಮುಖ ಮತ್ತು ಶಿವಮೊಗ್ಗ ವನ್ಯಜೀವಿ ವಿಭಾಗಗಳು, ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಸಿದ್ದಾಪುರ, ಅಮಾಸೆಬೈಲು ಮತ್ತು ನಗರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಹಾಗೂ ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳು ಭಾಗವಹಿಸಿದ್ದರು.
ಗುರುವಾರ ಮಧ್ಯಾಹ್ನ ಅರಣ್ಯ ಅಧಿಕಾರಿಗಳು ಆನೆಯ ಕತ್ತಿಗೆ ಅಳವಡಿಸಿದ್ದ ರೇಡಿಯೋ ಕಾಲರ್ ಬಳಸಿ ಅದನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸುವ ಮೂಲಕ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಸಂಜೆ 5:30 ರ ಹೊತ್ತಿಗೆ, ಸಕ್ರೆಬೈಲಿನ ಡಾ. ಕಲ್ಲಪ್ಪ, ಮಂಗಳೂರಿನ ಡಾ. ಯಶಸ್ವಿ, ಮತ್ತು ನಾಗರಹೊಳೆಯ ಡಾ. ರಮೇಶ್ ಎಂಬ ಪಶುವೈದ್ಯರು ಆನೆಗೆ ಅರಿವಳಿಕೆ ನೀಡಿದರು.
ಆನೆ 8-10 ನಿಮಿಷಗಳಲ್ಲಿ ಮಲಗುತ್ತದೆ ಎಂದು ನಿರೀಕ್ಷಿಸಲಾಗಿತ್ತಾದರೂ, ಅದು ಹೆನ್ನಾಬೈಲಿನ ಉರಪಾಲು ಬಳಿ ಕುಸಿದುಬೀಳುವ ಮೊದಲು ಸುಮಾರು 1.5 ಕಿಮೀ ಅರಣ್ಯದ ಆಳಕ್ಕೆ ಸಾಗಿತ್ತು. ನಾಗರಹೊಳೆಯ ಭೀಮ, ಮತ್ತು ಸಕ್ರೆಬೈಲಿನ ಬಹದ್ದೂರ್, ಬಾಲಚಂದ್ರ ಮತ್ತು ಸೋಮಣ್ಣ ಸೇರಿದಂತೆ ಕುಮ್ಕಿ ಆನೆಗಳನ್ನು ಕಾರ್ಯಾಚರಣೆಯಲ್ಲಿ ಬಳಸಲಾಯಿತು. ಸಾಕಾನೆಗಳು, ಮಾವುತರು, ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯರ ನೆರವಿನೊದಿಗೆ ಕೊನೆಗೂ ಕಾಡಾನೆಯನ್ನು ಹಿಡಿಯಲಾಯಿತು.
ಈ ಆನೆಯನ್ನು ಹಿಂದೆ ಹಾಸನದಲ್ಲಿ ಹಿಡಿದು ಮತ್ತೆ ಕಾಡಿಗೆ ರೇಡಿಯೋ ಕಾಲರ್ ಅಳವಡಿಸಿ ಬಿಡಲಾಗಿತ್ತು. ಇದೀಗ ಮತ್ತೆ ಸಿಕ್ಕಿರುವುದರಿಂದ ಸಕ್ರೆಬೈಲಿನ ಆನೆ ಶಿಬಿರಕ್ಕೆ ಕೊಂಡೊಯ್ಯಲಾಗಿದೆ.
ಎರಡು ದಿನಗಳಿಂದ ನಾಲ್ಕು ಇಟಿಎಫ್ ತಂಡಗಳು ಕಾರ್ಯಾಚರಣೆ ನಡೆಸಿದರೂ, ಆನೆ ಸೆರೆ ಸಿಗದೆ ತಪ್ಪಿಸಿಕೊಂಡಿತ್ತು. ಇದೀಗ ಅಂತಿಮವಾಗಿ 150 ಸಿಬ್ಬಂದಿಗಳು, 3 ಪಶುವೈದ್ಯರು ಹಾಗೂ 6 ಸಾಕಾನೆಗಳ ಕಾರ್ಯಾಚರಣೆ ಮೂಲಕ ಸಿದ್ದಾಪುರ ಸಮೀಪದ ಹೆನ್ನಾಬೈಲಿನ ಉರಪಾಲಿನ ಕಾಡಿನಲ್ಲಿ ಸೆರೆ ಹಿಡಿಯಲಾಗಿದೆ.
ಕಾರ್ಯಾಚರಣೆಗೆ ಅಡ್ಡಿಯಾಗದಿರಲಿ ಎಂದು ಸಿದ್ದಾಪುರ ಪರಿಸರದಲ್ಲಿ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಆಟೋಗಳಲ್ಲಿ ಧ್ವನಿವರ್ಧಕಗಳನ್ನು ಕಟ್ಟಿಕೊಂಡು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು. ಸಿದ್ದಾಪುರ-ಹೊಸಂಗಡಿ ರಾಜ್ಯ ಹೆದ್ದಾರಿಯನ್ನು ಮಧ್ಯಾಹ್ನ 3:30 ರಿಂದ ಸಂಜೆ 7:30 ರವರೆಗೆ ಸಂಪೂರ್ಣ ಬಂದ್ ಮಾಡಲಾಗಿತ್ತು.
'ಸಾರ್ವಜನಿಕರಿಗೆ ಯಾವುದೇ ಹಾನಿಯಾಗದಂತೆ ಆನೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಈ ಪರಿಸರದಲ್ಲಿ ಭಯದ ವಾತಾವರಣ ಇದ್ದುದ್ದರಿಂದ ಮುಂಜಾಗ್ರತ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹಾಗೆಯೇ ಮುಂದೆಯೂ ಅಗತ್ಯ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ' ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
'150 ಸಿಬ್ಬಂದಿ, ಮೂವರು ಪಶುವೈದ್ಯರು ಮತ್ತು ಆರು ಕುಮ್ಕಿ ಆನೆಗಳನ್ನು ಕಾರ್ಯಾಚರಣೆಯಲ್ಲಿ ಬಳಸಲಾಗಿತ್ತು. ಉನ್ನತ ಅಧಿಕಾರಿಗಳ ನಿರ್ದೇಶನದಂತೆ ಆನೆಯನ್ನು ಸಕ್ರೆಬೈಲಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ' ಎಂದು ಕುದುರೆಮುಖ ವನುಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮು ಬಾಬು ತಿಳಿಸಿದ್ದಾರೆ.