ಉಡುಪಿ, ಜು. 16 (DaijiworldNews/AA): ಮೀನುಗಾರಿಕೆಗೆಂದು ನಾಡದೋಣಿಯೊಂದಿಗೆ ಸಮುದ್ರಕ್ಕೆ ತೆರಳಿದ್ದ ಮೀನುಗಾರರು ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ಮತ್ತೋರ್ವನ ಮೃತದೇಹ ಬುಧವಾರ ಸಂಜೆ ಪತ್ತೆಯಾಗಿದೆ.

ನಾಡದೋಣಿಯೊಂದಿಗೆ ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಗಂಗೊಳ್ಳಿಯ ಹಳೆ ಅಳಿವೆ ಪ್ರದೇಶದಲ್ಲಿ ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆಯಾಗಿದ್ದರು. ಇದೀಗ ನಿರಂತರ ಶೋಧ ಕಾರ್ಯಾಚರಣೆಯ ಬಳಿಕ ಮತ್ತೋರ್ವ ಮೀನುಗಾರ ಮಲ್ಯಾರುಬೆಟ್ಟಿನ ಜಗನ್ನಾಥ ಖಾರ್ವಿ (50) ಅವರ ಮೃತದೇಹ ಕೋಡಿಯ ಕಿನಾರೆ ಬಳಿ ಪತ್ತೆಯಾಗಿದೆ.
ಬುಧವಾರ ಬೆಳಗ್ಗೆ ಗಂಗೊಳ್ಳಿ ಬೇಲಿಕೆರಿ ನಿವಾಸಿ ಲೋಹಿತ್ ಖಾರ್ವಿ (39) ಅವರ ಮೃತದೇಹ ಕೋಡಿ ಕಡಲ ತೀರದಲ್ಲಿ ಪತ್ತೆಯಾಗಿತ್ತು.
ಜುಲೈ 15 ರ ಬೆಳಿಗ್ಗೆ ಗಂಗೊಳ್ಳಿಯ ಹಳೆಯ ಅಳಿವೆ ಪ್ರದೇಶದ ಬಳಿ ಈ ದುರಂತ ಸಂಭವಿಸಿದ್ದು, ನಾಲ್ವರು ಮೀನುಗಾರರಿದ್ದ ದೋಣಿ ತೂಫಾನ್ಗೆ ಸಿಲುಕಿ ಮಗುಚಿ ಬಿದ್ದಿತ್ತು. ಅವರಲ್ಲಿ, ಮಲ್ಯಾರಬೆಟ್ಟಿನ ಸಂತೋಷ ಖಾರ್ವಿ ಅವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಇನ್ನು ಉಳಿದ ಮೀನುಗಾರ ಗಂಗೊಳ್ಳಿ ನಿವಾಸಿ ಸುರೇಶ್ ಖಾರ್ವಿ (48) ಅವರಿಗಾಗಿ ಶೋಧಕಾರ್ಯ ಮುಂದುವರೆದಿದೆ.