ಬಂಟ್ವಾಳ , ಜು. 20 (DaijiworldNews/AK): ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸುವ ಸರ್ಕಾರದ ಪ್ರಯತ್ನಗಳು ಮುಂದುವರಿದಿದ್ದು, ಇದರ ಭಾಗವಾಗಿ ಭಾನುವಾರ ಬಂಟ್ವಾಳ ತಾಲೂಕಿನ 60 ಪರೀಕ್ಷಾ ಕೇಂದ್ರಗಳಲ್ಲಿ ಅನಕ್ಷರಸ್ಥ ಕಲಕಾರ್ಥಿಗಳಿಗಾಗಿ ಮೂಲ ಸಾಕ್ಷರತಾ ಪರೀಕ್ಷೆಗಳು ನಡೆದಿದ್ದು ತಾಲೂಕಿನ 687 ಅಕ್ಷರ ವಂಚಿತರು ಪರೀಕ್ಷೆ ಬರೆದಿದ್ದಾರೆ.




ಬಂಟ್ವಾಳ ತಾಲೂಕಿನ 60 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಒಟ್ಟು 777ಕಲಿಕಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು, ವಿವಿಧ ಕಾರಣಗಳಿಗಾಗಿ 90 ಮಂದಿ ಗೈರಾಗಿದ್ದರು.
ತಾಲೂಕಿನ ಕೊಯಿಲ, ಬರಿಮಾರು, ಪೊಳಲಿ , ಮೂರ್ಜೆ, ಬಡಗಕಜೆಕಾರು, ತೆಂಕಕಜೆಕಾರು, ಚೆನ್ನೈತ್ತೋಡಿ, ಬಡಗಬೆಳ್ಳೂರು, ಕುಕ್ಕಿಪ್ಪಾಡಿ, ಆಚಾರಿಪಲ್ಕೆ, ಕುಜಿಲ ಬೆಟ್ಟು, ಬ್ರಹ್ಮರ ಕೂಟ್ಲು, ಬಂಟ್ರಿಂಜ, ಅನಂತಾಡಿ, ಬೋಳಂತೂರು ನರಿಕೊಂಬು, ಶಂಭೂರು ಪ್ರಾಥಮಿಕ , ಮಿತ್ತನಡ್ಕ, ಕುದ್ರೆಬೆಟ್ಟು, ಬಾಳ್ತಿಲ, ನಂದಾವರ, ಸಜಿಪಮುನ್ನೂರು, ಮಾಣಿಲ, ಸಿದ್ದಕಟ್ಟೆ, ಪುದು, ಪುಣಚ, ಪರಿಯಾಲ್ತಡ್ಕ, ಮೂಡುಪಡುಕೋಡಿ, ಕುಳಾಲು, ಉಳಿ, ಕಲ್ಲಡ್ಕ, ಕೆದಿಲ, ಸತ್ತಿಕಲ್ಲು, ಅಳಕೆಮಜಲು, ಬೊಂಡಾಲ, ಅಮ್ಮುಂಜೆ, ಬಡಕೊಟ್ಟು, ಕುಟ್ಟಿಕ್ಕಳ, ಅಜಿಲಮೊಗರು, ಪೆರಾಜೆ, ನಾಟೆಕಲ್ಲು, ಕೊಡಂಗಾಯಿ, ನೇರಳಕಟ್ಟೆ, ಬೋಳಂತೂರು, ನಗ್ರಿ, ಸಜಿಪಮೂಡ, ಕಾವಳಪಡೂರು ವಗ್ಗ, ಅಮೈ, ಕೇಪು, ಮಂಚಿ,ಪಕ್ಕಳಪಾದೆ, ಮುಚ್ಚಿರಪದವು,ವಳವೂರು, ಮಜಿ, ಕೆಲಿಂಜ, ಬಾಯಿಲ, ದೇವಸ್ಯ ಪಡೂರು, ಪೂಪಾಡಿಕಟ್ಟೆ ಶಾಲೆಗಳಲ್ಲಿ ಹಾಗೂ ಕುಂಡಡ್ಕ ಅಂಗನವಾಡಿ, ಗುಂಪಲಡ್ಕ ಅಂಗನವಾಡಿ,ದಡ್ಡಲ್ತಡ್ಕ ಅಂಗನವಾಡಿ, ಅಮ್ಟಾಡಿ ಗ್ರಾಮಪಂಚಾಯತ್ ಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಬೋಧಕರು ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿಕೊಟ್ಟರು.
ಜಿಲ್ಲಾ ಪಂಚಾಯತ್ ಉಪನಿರ್ದೇಶಕಿ(ಅಭಿವೃದ್ಧಿ) ರಾಜಲಕ್ಷ್ಮೀ ಯವರು ವಿಟ್ಲ ಭಾಗದ ಪರೀಕ್ಷಾ ಕೇಂದ್ರಗಳಿಗೆ ಬೇಟಿ ನೀಡಿದರು. ಬೊಂಡಾಲ ಹಿ.ಪ್ರಾ. ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಫಾತಿಮಾಬಿ ಯವರು ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ 2022-23 ರಲ್ಲಿ ಅನುಷ್ಠಾನಗೊಳಿಸಿದ್ದ ಸಾವಿರ ಗ್ರಾ.ಪಂ.ಗಳನ್ನು ಸಂಪೂರ್ಣ ಸಾಕ್ಷರ ಗ್ರಾಮಪಂಚಾಯತ್ ಗಳನ್ನಾಗಿಸುವ ಕಾರ್ಯಕ್ರಮದಡಿಯಲ್ಲಿ ಉಳಿಕೆ ಗುರಿಯ ಮೂರನೇ ಹಂತದ ಕಲಿಕೆಯ ಭಾಗವಾಗಿ ಕಳೆದ ಎಪ್ರಿಲ್ 27 ರಂದು ಬಂಟ್ವಾಳ ಹೊರತು ಪಡಿಸಿ ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಸಾಕ್ಷರತಾ ಪರೀಕ್ಷೆ ನಡೆಸಲಾಗಿತ್ತು, ಇದೀಗ ಲಿಂಕ್ ಡಾಕ್ಯುಮೆಂಟ್ ಜಿಲ್ಲಾ ಅನುದಾನದಲ್ಲಿ ಮೂಲ ಸಾಕ್ಷರತಾ ಪರೀಕ್ಷೆ ನಡೆಸಲಾಗಿದ್ದು, ಕಲಿಕಾರ್ಥಿಗಳು ಉತ್ಸಾಹದಿಂದ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ ಎಂದರು. ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಸಹಾಯಕ ನಿರ್ದೇಶಕ ಶಿವು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಯವರು ಹಾಗೂ ಗ್ರಾಮಪಂಚಾಯತ್ ಗಳ ಅಭಿವೃದ್ಧಿ ಅಧಿಕಾರಿಗಳು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು.
ಪರೀಕ್ಷೆಗೆ ಪೂರಕವಾಗಿ ಕಳೆದ ನಾಲ್ಕುತಿಂಗಳಿನಿಂದ ಗ್ರಾಮಪಂಚಾಯತ್ ನಿಂದ ನಿಯೋಜಿಸಲ್ಪಟ್ಟ ಬೋಧಕರು ನಿಗದಿತ ಕಲಿಕಾಕೇಂದ್ರಗಳಲ್ಲಿ ಗುರುತಿಸಲ್ಪಟ್ಟ ಅನಕ್ಷರಸ್ಥರಿಗೆ ಅಕ್ಷರ ಹಾಗೂ ಲೆಕ್ಕ ಪಾಠ ಮಾಡುತ್ತಿದ್ದರು.