ಬೆಳ್ತಂಗಡಿ, ಆ. 04 (DaijiworldNews/AK): ಧರ್ಮಸ್ಥಳ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಮೃತದೇಹಗಳನ್ನು ಹೂತು ಹಾಕಿದ್ದಾರೆ, ಯುವತಿಯ ಮೃತದೇಹವನ್ನು ಹೂತು ಹಾಕಿರುವುದನ್ನು ತಾನು ನೋಡಿದ್ದೇನೆ ಎಂದು ಶನಿವಾರ ಎಸ್.ಐ.ಟಿ ಕಚೇರಿಗೆ ದೂರು ನೀಡಲು ಬಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಎರಡನೇ ದೂರುದಾರ ಇಚಿಲಂಪಾಡಿ ನಿವಾಸಿ ಜಯಂತ್ ಟಿ ಅವರು ಸೋಮವಾರ ಧರ್ಮಸ್ಥಳ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.

ಸೋಮವಾರ ಜಯಂತ್ ಟಿ ಅವರು ಬೆಳ್ತಂಗಡಿಯ ಎಸ್.ಐ.ಟಿ ಕಚೇರಿಗೆ ದೂರು ನೀಡಲು ಬಂದಿದ್ದರು. .ಈ ವೇಳೆ ಎಸ್ ಐ ಟಿ ಅಧಿಕಾರಿಗಳು ದೂರನ್ನು ಪರಿಶೀಲಿಸಿದ ಅಧಿಕಾರಿಗಳು, ದೂರನ್ನು ಸೂಕ್ತಕ್ರಮಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನೀಡುವಂತೆ ಸೂಚಿಸಿದ್ದು, ಅದರಂತೆ ಎರಡನೇ ದೂರುದಾರ ಜಯಂತ್ .ಟಿ ಅವರು ಧರ್ಮಸ್ಥಳ ಠಾಣೆಗೆ ತೆರಳಿ ದೂರನ್ನು ನೀಡಿದ್ದಾರೆ.
ಈ ದೂರಿನ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ 200/DPS/2025 ರಂತೆ ಪ್ರಕರಣ ದಾಖಲಿಸಿಕೊಂಡಿರು ವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದು, ಈ ಪ್ರಕರಣದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.