ಮಂಗಳೂರು, ಆ. 10 (DaijiworldNews/AA): ಮಂಗಳೂರು ಧರ್ಮ ಪ್ರಾಂತ್ಯದ ಮೂಲ ಧರ್ಮ ಸಭೆಯ ಸಮುದಾಯ ಸಮ್ಮೇಳನವು ಕೋರ್ಡೆಲ್ ಚರ್ಚ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಮಂಗಳೂರು ಧರ್ಮ ಪ್ರಾಂತ್ಯದ 124 ಚರ್ಚ್ ಗಳ 1100 ಜನರು ಭಾಗವಹಿಸಿದ್ದರು. ಮಂಗಳೂರು ಧರ್ಮ ಪ್ರಾಂತ್ಯದ ಶ್ರೇಷ್ಠ ಗುರು ಅತಿ ವಂದನೀಯ ಫಾ. ಮ್ಯಾಕ್ಸಿಮ್ ಎಲ್. ನೊರೊನ್ಹಾ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಮೂಲ ಧರ್ಮ ಸಭೆ ಸಮುದಾಯ ರಾಜ್ಯ ಮಟ್ಟದ ಕಾರ್ಯದರ್ಶಿ ವಂದನೀಯ ಫಾ. ಮ್ಯಾಕ್ಸಿಮ್ ಡಯಾಸ್ ಮುಖ್ಯ ಅತಿಥಿಯಾಗಿದ್ದರು.
ಮುಖ್ಯ ನಿರ್ದೇಶಕರಾದ ವಂದನೀಯ ಫಾ. ಸುನಿಲ್ ಡಿಸೋಜಾ, ಕೋರ್ಡೆಲ್ ಚರ್ಚ್ ನ ಧರ್ಮಗುರು ವಂದನೀಯ ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸಿಲ್ವಿಯಾ ರೂತ್ ಕ್ಯಾಸ್ತಲಿನೊ, ಕಾರ್ಯದರ್ಶಿ ಅನಿಲ್ ಡೇಸಾ, ಸರ್ವ ಆಯೋಗಗಳ ಸಂಚಾಲಕ ಡಾಲ್ಫಿ ಡಿಸೋಜಾ, ಮೂಲ ಧರ್ಮ ಸಭೆಯ ಸಮುದಾಯದ ಕೋರ್ಡೆಲ್ ಚರ್ಚ್ ಸಂಚಾಲಕಿ ಜೂಲಿಯೆಟ್ ಮಿನೇಜಸ್, ಪ್ರಾಂತ್ಯ ಕಾರ್ಯದರ್ಶಿ ಆಶಾ ಮೊಂತೇರೊ ಅವರು ಉಪಸ್ಥಿತರಿದ್ದರು.
ಮಂಗಳೂರು ಧರ್ಮ ಪ್ರಾಂತ್ಯದ ಸರ್ವ ಆಯೋಗಗಳ ಸಂಚಾಲಕ ವಂದನೀಯ ಫಾ. ನವೀನ್ ಪಿಂಟೊ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮೂಲ ಧರ್ಮ ಸಭೆಯ ಸಮುದಾಯದ ಮಹತ್ವವನ್ನು ವಿವರಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಕೋರ್ಡೆಲ್ ಚರ್ಚ್ ನ ಧರ್ಮಗುರು ಫಾ. ಕ್ಲಿಫರ್ಡ್ ಫೆರ್ನಾಂಡಿಸ್ ಅವರು ಮೂಲ ಧರ್ಮ ಸಭೆಯ ಆಧ್ಯಾತ್ಮಿಕತೆಯನ್ನು ಈಗಿನ ಕ್ರೈಸ್ತರಲ್ಲಿ ಹೇಗೆ ಅಳವಡಿಸಿಕೊಳ್ಳ ಬಹುದೆಂದು ವಿವರಿಸಿದರು.
ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಬಲಿ ಪೂಜೆಯನ್ನು ನಡೆಸಿ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ವಂದನೀಯ ಫಾ. ಸುನಿಲ್ ಡಿಸೋಜಾ ಸ್ವಾಗತಿಸಿ ಆಶಾ ಮೊಂತೇರೊ ವಂದಿಸಿದರು. ತೆರೆಸಾ ಕಾರ್ಡೋಜಾ ಕಾರ್ಯಕ್ರಮ ನಿರೂಪಿಸಿದರು.