ಬಂಟ್ವಾಳ, ಆ. 19 (DaijiworldNews/TA): ಕೇರಳದ ಪೋಲೀಸರಿಗೆ ಮೋಸ್ಟ್ ವಾಂಟೆಡ್ ಆರೋಪಿಯೋರ್ವನ ಕಾರು ಮಂಚಿಯಲ್ಲಿ ಅಪಘಾತವಾಗಿದೆ. ಕೇರಳ ನಿವಾಸಿ ಮೊಹಮ್ಮದ್ ರಾಝಿಕ್ ಎಂಬಾತನ ಕಾರು ಮಂಚಿಯಲ್ಲಿ ಇನ್ನೊಂದು ಕೇರಳ ಮೂಲದ ಕಾರಿಗೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಈತನ ಜೊತೆ ಸ್ನೇಹಿತರಾದ ಸಿಬಿನ್, ಸಯ್ಯದ್ ಮಹಮ್ಮದ್ ಆಲ್ ಅಮೀನ್ ಎಂಬವರು ಕೂಡ ಕಾರಿನಲ್ಲಿ ಇದ್ದರು ಎನ್ನಲಾಗಿದೆ.



ಕೇರಳ ರಾಜ್ಯದ ಮಂಜೇಶ್ವರ ಪೋಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಆರೋಪಿಯಾಗಿರುವ ಈತ ಹಳೆಯ ಆರೋಪಿ ಕೂಡ ಆಗಿದ್ದ ಎನ್ನಲಾಗಿದೆ. ಹಾಗಾಗಿ ಪೋಲೀಸರ ತಂಡ ಈತನನ್ನು ಬಂಧನಕ್ಕೆ ಬಲೆ ಬೀಸಿತ್ತು. ಮಂಗಳವಾರ ಮಧ್ಯಾಹ್ನ ಈತನ ಕಾರು ಬಂಟ್ವಾಳದ ಕಡೆ ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕೇರಳ ಪೋಲೀಸರ ತಂಡ ಈತನ ಬೆನ್ನ ಹಿಂದೆ ಬಿದ್ದಿದ್ದರು.
ಪೋಲೀಸರ ಬೇಟೆಯ ವಿಚಾರ ತಿಳಿದ ಈತ ಅತಿಯಾದ ವೇಗದೊಂದಿಗೆ ಬಂದು ಮಂಚಿಯ ಮೋಂತಿಮಾರು ಎಂಬಲ್ಲಿ ಕೇರಳ ಮೂಲದ ಆಲ್ಟೊ ಕಾರೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದ. ಆದರೆ ಪೋಲೀಸರ ಸಮಯ ಪ್ರಜ್ಞೆಯಿಂದ ಈತನನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.