ಕಾರ್ಕಳ, ಸೆ. 01 (DaijiworldNews/AA): ಉಡುಪಿ ಜಿಲ್ಲಾ ಪಂಚಾಯತ್, ಉಡುಪಿಯ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಹಾಗೂ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಇವರ ಸಹಯೋಗದೊಂದಿಗೆ ಕ್ರೈಸ್ಟ್ಕಿಂಗ್ ವಿದ್ಯಾಸಂಸ್ಥೆ ವತಿಯಿಂದ ಗಾಂಧಿ ಮೈದಾನದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.



ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ-ಅಧ್ಯಕ್ಷ ಅವಿನಾಶ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಮಕ್ಕಳು ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸಿ ನಮ್ಮ ಜಿಲ್ಲೆಗೆ ಕೀರ್ತಿ ತರಬೇಕು" ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ, ನಗರಸಭಾ ಸದಸ್ಯ ಶುಭದ ರಾವ್ ಅವರು ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ಕಿಂಗ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರುಡಾಲ್ಫ್ ಕಿಶೋರ್ ಲೋಬೊ ಮಾತನಾಡಿ, "ಕ್ರೀಡೆಯಲ್ಲಿ ಭಾಗವಹಿಸುವುದೇ ವಿಜಯದ ಒಂದು ಹೆಜ್ಜೆ. ಎಲ್ಲಾ ಕ್ರೀಡಾಪಟುಗಳು ಪರಸ್ಪರ ಸ್ಪೂರ್ತಿ ನೀಡುವ ರೀತಿಯಲ್ಲಿ ಸ್ಪರ್ಧಿಸಬೇಕು" ಎಂದರು.
ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮದ ಪ್ರಸ್ತಾವನೆ ಮಾಡಿದರು.
ವೇದಿಕೆಯಲ್ಲಿ ಕ್ರೈಸ್ಟ್ಕಿಂಗ್ ಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಅವೆಲಿನ್ ಲೂಯಿಸ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಕಾರ್ಕಳ ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಕ್ರೈಸ್ಟ್ಕಿಂಗ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾಮತ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜೋಸ್ನಾ ಸ್ನೇಹಲತಾ, ಪ್ರೌಢಶಾಲಾ ವಿಭಾಗದ ಪೋಷಕರ ಸಂಘದ ಅಧ್ಯಕ್ಷೆ ಶರಿತಾ ನೊರೊನ್ಹಾ ಮತ್ತು ಪ್ರಾಥಮಿಕ ವಿಭಾಗದ ಉದಯ ರವಿ ಉಪಸ್ಥಿತರಿದ್ದರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ನಾಯಕ್ ಸ್ವಾಗತಿಸಿದರು, ಶಿಕ್ಷಕಿ ಜೆಸ್ಲಿನ್ ಡಿ'ಸೋಜಾ ವಂದನಾರ್ಪಣೆ ಮಾಡಿದರು ಮತ್ತು ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.