ಮಂಗಳೂರು ,ಸೆ. 03 (DaijiworldNews/AK): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಭೂಸ್ವಾಧೀನಕ್ಕಾಗಿ ಕಳೆದ ಹತ್ತು ವರ್ಷಗಳಲ್ಲಿಯೇ ಅತಿ ದೊಡ್ಡ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವನ್ನು ಕಾಂಗ್ರೆಸ್ ನಾಯಕ ಪದ್ಮರಾಜ್ ಆರ್ ಪೂಜಾರಿ ಶ್ಲಾಘಿಸಿದ್ದಾರೆ.


ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇ ವಿಸ್ತರಣೆಗಾಗಿ 32.97 ಎಕರೆ ಜಾಗ ಸ್ವಾಧೀನಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆಗೆ ಪ್ರಕಾರ ಜಾಗ ಕಳೆದುಕೊಳ್ಳುವವರಿಗೆ ಗರಿಷ್ಠ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಹಾಗು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರ ಗಮನಕ್ಕೆ ತಂದಿದ್ದೇನೆ ಎಂದು ಪೂಜಾರಿ ಹೇಳಿದರು.
ಸ್ಪೀಕರ್ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ಅಶೋಕ್ ರೈ, ಮತ್ತು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ'ಸೋಜಾ ಮತ್ತು ಮಂಜನಾಥ್ ಭಂಡಾರಿ ಅವರ ಸಾಮೂಹಿಕ ಒತ್ತಡವೇ ಈ ಪ್ರಗತಿಗೆ ಕಾರಣ ಎಂದು ಅವರು ಹೇಳಿದರು.
ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರವು ಮಂಗಳೂರು ವಿಮಾನ ನಿಲ್ದಾಣ ಖಾಸಗಿ ಒಡೆತನದಲ್ಲಿದ್ದರೂ, ರಾಜ್ಯ ಸರ್ಕಾರಕ್ಕೆ ಮೊದಲ ಬಾರಿಗೆ ಹಣ ಪಾವತಿಸಲು ಒಪ್ಪಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರವು ಎಲ್ಲಾ ಫಲಾನುಭವಿಗಳಿಗೆ ಸಹಾಯ ಮಾಡಲು ಪಾರದರ್ಶಕ ರೀತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲಿದೆ. ಈ ಹಿಂದೆ ಕೇಂದ್ರ ಸರ್ಕಾರ ಭೂಮಿ ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿತ್ತು. ಆದರೆ ಸ್ಥಳೀಯ ಭೂಮಾಲೀಕರಿಗೆ ಪರಿಹಾರ ಸಿಗಲೇಬೇಕೆಂದು ರಾಜ್ಯ ಸರ್ಕಾರವು ದೃಢವಾಗಿ ನಿಂತು ಯಶಸ್ವಿಯಾಗಿದೆ.
ಜನಪರ ಕಾಳಜಿಯ ಹೊಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಎಂದಿಗೂ ಜನತೆಯ ಪರವಾಗಿದೆ ಎನ್ನುವುದಕ್ಕೆ ಇದು ಒಂದು ನಿದರ್ಶನ ಎಂದು ಹೇಳಿದರು.