ಮೂಡುಬಿದಿರೆ, ಸೆ. 04 (DaijiworldNews/AA): ದೂರು ನೀಡಲು ಬಂದ ಮಹಿಳೆಗೆ ಪದೇ ಪದೇ ಕರೆ ಅಶ್ಲೀಲ ಕರೆಗಳು ಮತ್ತು ಸಂದೇಶಗಳ ಮೂಲಕ ಕಿರುಕುಳ ನೀಡಿದ ಆರೋಪದಡಿ ಮೂಡುಬಿದಿರೆ ಠಾಣೆಯ ಪೊಲೀಸ್ ಪೇದೆಯನ್ನು ಅದೇ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಪೇದೆ ಶಾಂತಪ್ಪ (28) ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಬಂಧನಕ್ಕೂ ಮುನ್ನವೇ ಪೊಲೀಸ್ ಆಯುಕ್ತರು ಅವರನ್ನು ಅಮಾನತುಗೊಳಿಸಿದ್ದರು.
ಆಗಸ್ಟ್ 25ರಂದು ಮಹಿಳೆ ತನ್ನ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕುರಿತು ದೂರು ನೀಡಲು ಠಾಣೆಗೆ ಬಂದಿದ್ದರು. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಶಾಂತಪ್ಪ ಅವರ ಮೊಬೈಲ್ ನಂಬರ್ ಬರೆದುಕೊಂಡಿದ್ದರು. ನಂತರ, ಇನ್ಸ್ಪೆಕ್ಟರ್ ದಂಪತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ಇದರ ನಂತರ ಶಾಂತಪ್ಪ ಮಹಿಳೆಗೆ ಮೂರು ಬಾರಿ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ಕರೆಯ ದಾಖಲೆಗಳನ್ನು ಪುರಾವೆಯಾಗಿ ನೀಡಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನವರಾದ ಶಾಂತಪ್ಪ 2022ರಲ್ಲಿ ಪೊಲೀಸ್ ಇಲಾಖೆಗೆ ಪೇದೆಯಾಗಿ ಸೇರಿದ್ದರು.