ಬಂಟ್ವಾಳ, ಸೆ. 17 (DaijiworldNews/AA): ಬಂಟ್ವಾಳ ತಾಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ವಿಶ್ವಕರ್ಮ ಜಯಂತಿ ಆಚರಣೆ ನಡೆಯಿತು.





ಕಾರ್ಯಕ್ರಮದಲ್ಲಿ ಸಂದೇಶ ನೀಡಿದ ರಮೇಶ್ ಪುರೋಹಿತ್, ವಿಶ್ವಕರ್ಮರು ಸಮಾಜಮುಖಿಯಾಗಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪತಹಸೀಲ್ದಾರ್ ದಿವಾಕರ ಮುಗುಳ್ಯ ಮಾತನಾಡಿ, ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಮುಂದಿನ ವರ್ಷ ಸಮಾಜದ ಸಹಕಾರದೊಂದಿಗೆ ಮತ್ತಷ್ಟು ಅರ್ಥಪೂರ್ಣವಾಗಿ ನಡೆಸುವುದಾಗಿ ಹೇಳಿದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಇಂದು ಇಡೀ ಜಗತ್ತು ವಿಶ್ವಕರ್ಮರ ಯೋಚನೆ, ಯೋಜನೆಯಿಂದ ನಿಂತಿದೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆಯಾಗಲಿ ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾತನಾಡಿ, ಇಡೀ ಸಮಾಜಕ್ಕೆ ಸೇರಿದವರಾದ ವಿಶ್ವಕರ್ಮ ಜಯಂತಿ ಆಚರಣೆಯ ಜೊತೆಗೆ ಸಮಾಜದ ಏಳಿಗೆಯ ಕುರಿತು ಚಿಂತನೆಯೂ ಅಗತ್ಯ ಎಂದರು.
ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ ಮಾತನಾಡಿ, ಮುಂದಿನ ವರ್ಷ ಸರಕಾರ ಮತ್ತು ಸಮಾಜ ಒಟ್ಟು ಸೇರಿ ಜಯಂತಿ ಆಚರಣೆ ಆಗಬೇಕು, ಸಮಾಜದ ಒಳಿತಿಗೆ ಎಂದು ಕೈಗೊಂಡ ಯೋಜನೆಗಳು ಸಮಾಜದವರಿಗೆ ತಲುಪಬೇಕು ಎಂದು ಹೇಳಿದರು.
ಉಪಾಧ್ಯಕ್ಷ ಸಂದೀಪ್ ಬಿ.ಆಚಾರ್ಯ ಭಂಡಾರಿಬೆಟ್ಟು ಮಾತನಾಡಿ, ಸಮಾಜದ ಏಳಿಗೆಗೆ ಸರ್ವರ ಸಹಕಾರ ಕೋರಿದರು. ಮುಖಂಡರಾದ ಸುನೀಲ್ ಬಿ.ಆಚಾರ್ಯ ಮಾತನಾಡಿ, ಶಿಲ್ಪಕ್ಕೆ ಜೀವ ತುಂಬುವ ಕೆಲಸವನ್ನು ವಿಶ್ವಕರ್ಮರು ಮಾಡುತ್ತಿದ್ದಾರೆ ಎಂದರು. ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್ ಆಚಾರ್ಯ ಮಾತನಾಡಿ, ಸಮಾಜಕ್ಕಿರುವ ಸವಾಲುಗಳ ಕುರಿತು ತಿಳಿಸಿದರು.
ಈ ಸಂದರ್ಭ ಯಶೋಧರ ಆಚಾರ್ಯ ಅವರಿಗೆ ಗೌರವಾರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ವಿಶ್ವಜ್ಯೋತಿ ಮಹಿಳಾ ಮಹಿಳಾ ಮಂಡಳಿ ಉಪಾಧ್ಯಕ್ಷೆ ಪ್ರಪುಲ್ಲ ಆಚಾರ್ಯ, ಸಂಘದ ಪ್ರಮುಖರಾದ ಅಶೋಕ ಆಚಾರ್ಯ, ಜಯಚಂದ್ರ ಆಚಾರ್ಯ, ವಿಶ್ವನಾಥ ಆಚಾರ್ಯ, ಯುವರಾಜ ಆಚಾರ್ಯ ಸಹಿತ ವಿಶ್ವಕರ್ಮ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.