ಬಂಟ್ವಾಳ, ಸೆ.21 (DaijiworldNews/TA): ಕಂಚಿನಡ್ಕ ಪದವು ಎಂಬಲ್ಲಿನ ಹೊಂಡಕ್ಕೆ ಬಿದ್ದು, ಅವಿವಾಹಿತ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಉಳ್ಳಾಲ ತಾಲೂಕಿನ ಇರಾ ಸಮೀಪದ ಸೂತ್ರಬೈಲು ನಿವಾಸಿ ಉಮ್ಮರ್ ಅವರ ಪುತ್ರ ಅಬ್ದುಲ್ ಅಮೀರ್ ( 23) ಮೃತ ಯುವಕ.

ಅಮೀರ್ ಕೂಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಶನಿವಾರ ಕೂಡ ಶಂಶೀರ್ ಇಕ್ಬಾಲ್ ಮತ್ತು ರಿಜ್ವಾನ್ ಎಂಬವರ ಜೊತೆ ಸಜೀಪ ಮೂಡ ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಕೆಲಸಕ್ಕೆ ಹೋಗಿದ್ದು, ಸಂಜೆ ಕೆಲಸ ಮುಗಿಸಿ ಅಲ್ಲೇ ಸಮೀಪದಲ್ಲಿ ಇದ್ದ ಗುಂಡಿಗೆ ಕೈಕಾಲು ತೊಳೆಯಲು ಇಳಿದಿದ್ದರು.
ಅ ಸಂದರ್ಭದಲ್ಲಿ ಅಮೀರ್ ಆಯ ತಪ್ಪಿ ಆಕಸ್ಮಿಕವಾಗಿ ಗುಂಡಿಗೆ ಬಿದ್ದು ಗಾಯಗೊಂಡಿದ್ದರು. ಗಾಯಗೊಂಡ ಅಮೀರ್ ನನ್ನು ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬ ಮೂಲಗಳು ಹೇಳಿವೆ. ಘಟನೆಯ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.