ಉಳ್ಳಾಲ, ಅ. 08 (DaijiworldNews/TA): ಮಂಜನಾಡಿ ಗುಡ್ಡ ಕುಸಿತ ದುರಂತದ ನ್ಯಾಯಕ್ಕಾಗಿ ಸರಕಾರಕ್ಕೆ ಸ್ಥಳೀಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ ಬಗ್ಗೆ ಸಂತ್ರಸ್ತೆ ಅಶ್ವಿನಿ ಕುಟುಂಬಿಕರು ಸರಕಾರಕ್ಕೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ, ಜಿಲ್ಲಾಡಳಿತ ತುರ್ತು ನೋಟಿಸ್ ಜಾರಿ ಮಾಡಿ ತನಿಖೆಗೆ ಕಾರ್ಯಪಾಲಕ ಇಂಜಿನಿಯರ್ ನೀರಾವರಿ ಇಲಾಖೆ ಅವರನ್ನು ನೇಮಿಸಿದ್ದಾರೆ.

ಇನ್ನು ತನಿಖೆ ನಡೆಸಲು ನಾಳೆ ಬರುತ್ತೇವೆ ಎಂದು ವ್ಯಾಟ್ಸ್ ಅಪ್ ಮುಖಾಂತರ ತುರ್ತು ನೋಟಿಸ್ ನೀಡಿ, ʻಗುಡ್ಡ ಹೇಗೆ ಬಿತ್ತುʼ ಎಂದು ಎರಡೂ ಕಾಲು ಕಳೆದುಕೊಂಡಿರುವ ಅಶ್ವಿನಿ ಅವರಿಗೆ ಸಾಕ್ಷ್ಯ ಹೇಳಲು ಸೂಚಿಸಿರುವ ಇಲಾಖೆ ಅಧಿಕಾರಿಗಳ ನಡೆ ಕುಟುಂಬಿಕರನ್ನು ಇನ್ನಷ್ಟು ಕೆರಳಿಸಿದೆ. ಘಟನೆ ನಡೆದ ಮಂಜನಾಡಿಯ ಮೊಂಟೆ ಪದವು ಸ್ಥಳಕ್ಕೆ ಅ. 8 ರಂದು ಅಶ್ವಿನಿ ಹಾಜರಿರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಸೆ.30 ರಂದು ಮಾನವ ಹಕ್ಕುಗಳ ಆಯೋಗ ಮಂಗಳೂರು ಪೊಲೀಸ್ ಕಮೀಷನರ್ ಅವರಲ್ಲಿ ನ. 17 ರ ಒಳಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ನೋಟೀಸ್ ಜಾರಿ ಮಾಡಿತ್ತು.
ಅಸಹಾಯಕಳಾಗಿರುವ ಅಶ್ವಿನಿ ಅವರು ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ನೀಡಿರುವ ದೂರಿನಲ್ಲಿ ‘ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಉರುಮನೆ ಕೋಡಿಯಲ್ಲಿ ಮೇ. 30 ರಂದು ನಡೆದ ಗ್ರಾಮದ ಅವೈಜ್ಞಾನಿಕ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಗುಡ್ಡವನ್ನು ಕಡಿಯಲಾಗಿತ್ತು. ಪಂಚಾಯತ್ ರಸ್ತೆ ಕಾಮಗಾರಿಯಿಂದ ಗುಡ್ಡ ಕುಸಿದು ನನ್ನ ಮನೆ ಮೇಲೆ ಬಿದ್ದ ಪರಿಣಾಮ ನನ್ನ ಇಬ್ಬರು ಮಕ್ಕಳು ನನ್ನ ಅತ್ತೆ ಸೇರಿದಂತೆ ಮೂವರು ಮೃತಪಟ್ಟಿದ್ದು, ನನ್ನ ಎರಡೂ ಕಾಲುಗಳು ಕತ್ತರಿಸಲ್ಪಟ್ಟು ಮತ್ತು ನನ್ನ ಮಾವನ ಒಂದು ಕಾಲು ತುಂಡಾಗಿ ಶಾಶ್ವತ ಅಂಗವಿಕಲತೆಗೆ ಒಳಗಾಗಿದ್ದೇವೆ. ಆದರೆ, ಈ ಘಟನೆಗೆ ಕಾರಣರಾದ ರಸ್ತೆ ಮೇಲುಸ್ತುವಾರಿಯ ಇಂಜಿನಿಯರ್ ವಿರುದ್ಧ ಕೋಣಾಜೆ ಪೊಲೀಸರಿಗೆ ಘಟನೆ ನಡೆದ ದಿನವೇ ನಮ್ಮ ಮನೆಯವರ ಮೂಲಕ ಎಫ್ಐಆರ್ ದಾಖಲಿಸಲು ಲಿಖಿತವಾಗಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ,ಪಂಚಾಯತ್ ಮತ್ತು ಗ್ರಾಮಾಭಿವೃದ್ದಿ ಇಲಾಖೆ, ರಾಜ್ಯ ಮಾನವ ಹಕ್ಕುಗಳ ಅಯೋಗ ಹಾಗೂ ಜಿಲ್ಲಾಧಿಕಾರಿಗಳಿಗೆ ,ದ ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ತನಿಖೆಗೆ ಕೋರಲಾಗಿತ್ತು.
ಅದೇ ರೀತಿಯಲ್ಲಿ ಸುಳ್ಳು ವರದಿ ಕುರಿತು ಮಾನವ ಹಕ್ಕುಗಳ ಆಯೋಗಕ್ಕೂ ಎರಡನೇ ಬಾರಿ ದೂರು ಸಲ್ಲಿಸಲಾಗಿತ್ತು. ಅದರಂತೆ ಮತ್ತೊಮ್ಮೆ ಸ್ಪಂದಿಸಿರುವ ಆಯೋಗ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿತ್ತು. ಇದೀಗ ರಾಜ್ಯಮಟ್ಟದ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಅವರಲ್ಲಿ ತನಿಖೆಗೆ ಸೂಚಿಸಿದಂತೆ, ಅಧಿಕಾರಿಗಳು ತುರಾತುರಿಯಲ್ಲಿ ಅ.7 ರ ಮಧ್ಯಾಹ್ನ ವೇಳೆಗೆ ದೂರುದಾರರ ಮೊಬೈಲ್ ಸಂಖ್ಯೆಯ ವಾಟ್ಸಪ್ ಗೆ ನೋಟೀಸ್ ನೀಡಿ ಅ.8 ರಂದು ಹಾಜರಿರುವಂತೆ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಅವರಿಗೆ ಸೂಚಿಸಿದ್ದಾರೆ. ತನಿಖೆಯ ಧಿಕ್ಕು ತಪ್ಪಿಸುವ ಉದ್ದೇಶದಿಂದಲೇ ಆತುರದ ತನಿಖೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.