ಮಂಗಳೂರು, ಅ. 19 (DaijiworldNews/AA): ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಎಂ.ಸಿ.ಸಿ. ಬ್ಯಾಂಕ್ ಲಿ., ಹಂಪನಕಟ್ಟೆ ಇದರ ಸಭಾಂಗಣದಲ್ಲಿ ಅಕ್ಟೋಬರ್ 19ರಂದು 'ಸಾಹಿತ್ಯ ಭಂಡಾರ' ಎಂಬ ಕಾರ್ಯಕ್ರಮ ನೆರವೇರಿತು.

















ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರು ಪ್ರಾಸ್ತಾವಿಕವಾಗಿ ಮಾತಾನಾಡಿ, "ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಕ್ಷೇತ್ರಗಳಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಲು, ಸರ್ಕಾರವು ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದೆ. ಕೊಂಕಣಿಯಲ್ಲಿ ವಿವಿಧತೆಯನ್ನು ಕಾಪಾಡಲು ಹಾಗೂ ಕೊಂಕಣಿಯ ಶ್ರೀಮಂತಿಕೆಯನ್ನು ಹೆಚ್ಚಿಸಲು ಅಕಾಡೆಮಿಯು ನಿರಂತರವಾಗಿ ಕೆಲಸ ಮಾಡುತ್ತಿದೆ. ಅಕಾಡೆಮಿಯು ಸಾಹಿತಿಗಳಿಂದ ಪುಸ್ತಕಗಳನ್ನು ಪಡೆದು, ಪರಿಶೀಲಿಸಿ, ಸೂಕ್ತ ಪುಸ್ತಕಗಳನ್ನು ಆಯ್ದು, ಪ್ರಕಟಿಸಿ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಅಕಾಡೆಮಿಯು ಹಿರಿಯ ಸಾಹಿತಿಗಳನ್ನು ಭೇಟಿ ಮಾಡಿ, ಅವರನ್ನು ಗೌರವಿಸುತ್ತಾ ಬಂದಿದೆ. ಯಾರಾದರೂ ಹಿರಿಯ ಸಾಹಿತಿಗಳಿದ್ದಲ್ಲಿ ನಮಗೆ ತಿಳಿಸಿ, ಅವರನ್ನು ಖಂಡಿತ ಭೇಟಿ ಮಾಡುತ್ತೇವೆ" ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಜವಹರ್ಲಾಲ್ ನೆಹರೂ ವಿಶ್ವವಿದ್ಯಾಲಯ ನ್ಯೂಡೆಲ್ಲಿ ಇಲ್ಲಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊಫೆಸರ್ ವಲೇರಿಯನ್ ರೊಡ್ರಿಗಸ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತಾನಾಡಿದ ಅವರು, "ನನ್ನ ಮಾತೃಭಾಷೆ ಹಾಗೂ ನಾನು ಮನೆಯಲ್ಲಿ ಮಾತಾನಾಡುವ ಭಾಷೆ ಕೊಂಕಣಿ. ಭಾರತದಲ್ಲಿ ಕೊಂಕಣಿ ಮಾತಾನಾಡುವ ಜನಸಂಖ್ಯೆ ಕಡಿಮೆಯಿದ್ದರೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬಾ ಸಾಹಿತಿಗಳು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಕೊಂಕಣಿ ಅಕಾಡೆಮಿಯು ಮಾಡುತ್ತಾ ಬಂದಿದೆ" ಎಂದು ಹೇಳಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.
ಖ್ಯಾತ ಕೊಂಕಣಿ ಸಾಹಿತಿಗಳು ಬರೆದ ಕೊಂಕಣಿಯ 9 ಪುಸ್ತಕಗಳನ್ನು ಬಿಡುಗಡೆಮಾಡಲಾಯಿತು. ಎಲ್ಲಾ ಸಾಹಿತಿಗಳ ಪರವಾಗಿ ಜ್ಯೋ ಲೋಬೊರವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಲಿಲ್ಲಿ ಮಿರಾಂದಾರವರು 2016ರಲ್ಲಿ ಕನ್ನಡದಿಂದ ಕೊಂಕಣಿಗೆ ಅನುವಾದಿಸಿದ ಪೂರ್ಣಚಂದ್ರ ತೇಜಸ್ವಿಯವರ 'ಕರ್ವಾಲೊ' ಪುಸ್ತಕದ ಇ-ಬುಕ್ ಆವೃತ್ತಿಯನ್ನು ದಾಯ್ಜಿವರ್ಲ್ಡ್ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆರವರು ಬಿಡುಗಡೆಗೊಳಿಸಿದರು. ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊರವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಐಎಎಸ್ ಅಧಿಕಾರಿ, ಪ್ರಸ್ತುತ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾಗಿ ನೇಮಿಸಲ್ಪಟ್ಟ ವಿನ್ಸೆಂಟ್ ರಿಚರ್ಡ್ ಡಿಸೋಜರವರನ್ನು ಹೂಗುಚ್ಚ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.
ಕೊಂಕಣಿ ಅಕಾಡೆಮಿಯು ಹಮ್ಮಿಕೊಂಡ ಸಾಹಿತ್ಯ ಸ್ಪರ್ಧೆಯಲ್ಲಿ ಕಾದಂಬರಿ ವಿಭಾಗದ ವಿಜೇತರಾದ ರೋಶನ್ ಮೆಲ್ಕಿ ಸಿಕ್ವೇರಾ, ವಿನ್ಸೆಂಟ್ ಪಿಂಟೊ, ಆಂಜೆಲೊರ್, ಸ್ಟೀಫನ್ ಮಸ್ಕರೇನ್ಹಸ್ (ಹೇಮಾಚಾರ್ಯ) ಹಾಗೂ ಕಿರುನಾಟಕ ವಿಭಾಗದ ವಿಜೇತರಾದ ಹಿಲರಿ ಡಿಸಿಲ್ವ (ಪ್ರಸನ್ನ್ ನಿಡ್ಡೋಡಿ), ಫಾ| ಅನಿಲ್ ಅವಿಲ್ಡ್ ಲೋಬೊ ಇವರಿಗೆ ಎಂ.ಸಿ.ಸಿ. ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಅಕಾಡೆಮಿ ಸದಸ್ಯರಾದ ನವೀನ್ ಲೋಬೊರವರು ವಂದನಾರ್ಪಣೆಗೈದರು. ಕ್ರಿಸ್ಟೋಫರ್ ಅನಿಲ್ ಮೊಂತೇರೊ ಕಾರ್ಯಕ್ರಮವನ್ನು ನಿರೂಪಿಸಿದರು. ಅಕಾಡೆಮಿ ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ಸಮರ್ಥ್ ಭಟ್, ದಯಾನಂದ ಮಡ್ಕೇಕರ್, ಸುನಿಲ್ ಸಿದ್ದಿ, ಸಪ್ನಾ ಮೇ ಕ್ರಾಸ್ತಾ, ಅಕ್ಷತಾ ನಾಯಕ್ ಅವರು ಉಪಸ್ಥಿತರಿದ್ದರು.
ಕರ್ವಾಲೊ ಇ- ಪುಸ್ತಕದ ಲಿಂಕ್: https://play.google.com/store/books/details?id=bNeOEQAAQBAJ