ಉಡುಪಿ, ಅ. 23 (DaijiworldNews/ TA): ಜಿಲ್ಲೆಯ ಬೈಂದೂರು ತಾಲ್ಲೂಕಿನ ವಿವಿಧೆಡೆ ಮಂಗಗಳ ಹಾವಳಿ ವಿಪರೀತವಾಗುತ್ತಿದ್ದು, ಸಾರ್ವಜನಿಕರಿಗೆ, ಕೃಷಿಕರಿಗೆ ಸಂಕಷ್ಟ ಎದುರಾಗಿದೆ.

ಮಂಗಗಳ ಹಿಂಡು ತೋಟಗಳಿಗೆ ಲಗ್ಗೆ ಇಡುತ್ತಿದ್ದು, ತೆಂಗಿನ ಮರಹತ್ತಿ ಸೀಯಾಳ ಕುಡಿದು ಕಿತ್ತೆಸೆಯುತ್ತಿವೆ. ಹಿಂಡು ಹಿಂಡಾಗಿ ದಾಳಿ ಮಾಡುವ ಮಂಗಗಳು ಎಗ್ಗಿಲ್ಲದೆ ತೆಂಗಿನ ಫಸಲನ್ನು ನಾಶ ಮಾಡುತ್ತಿವೆ. ತೆಂಗು ಮಾತ್ರವಲ್ಲದೇ ಅಡಕೆ ತೋಟಗಳಲ್ಲಿ ಅಡಕೆ ಕಿತ್ತು ಹಾಕುವ ಜೊತೆಗೆ ಹಿಂಗಾರವನ್ನು ಹಾಳು ಮಾಡುತ್ತಿವೆ. ಬಾಳೆಮರದ ಮೊಳಕೆ, ಪಪ್ಪಾಯ, ಪೇರಳೆ, ತರಕಾರಿ ಬೆಳೆಯೂ ಮಂಗಗಳ ಪಾಲಾಗುತ್ತಿದೆ. ತೆಂಗಿನ ಮರದಲ್ಲಿ ಶೇ 60ರಿಂದ ಶೇ 70ರಷ್ಟು ಫಸಲು ನಷ್ಟವಾಗುತ್ತದೆ. ಹೀಗಾಗಿ ಸೀಯಾಳ ಮತ್ತು ತೆಂಗಿನ ಇಳುವರಿ ಕಡಿಮೆಯಾಗಿದೆ ಎಂದು ಕೃಷಿಕರು ದೂರಿದ್ದಾರೆ.
ಈ ಬಾರಿ ತೆಂಗಿಗೆ ಉತ್ತಮ ಬೆಲೆ ಇದೆ. ಆದರೆ, ಬೆಳೆ ಮಂಗಗಳ ಪಾಲಾಗುತ್ತಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ಮಂಗಗಳ ಹಾವಳಿಯಿಂದ ಬೇಸತ್ತ ಜನ ಅವುಗಳನ್ನು ಓಡಿಸುವ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಪಟಾಕಿ, ಹುಸಿ ಗುಂಡು ಸೇರಿದಂತೆ ಹಲವಾರು ಉಪಾಯಗಳನ್ನು ಮಾಡಿದ್ದಾರೆ. ಮೊದ ಮೊದಲು ಹೆದರುತ್ತಿದ್ದ ಮಂಗಗಳು ಇತ್ತೀಚಿನ ದಿನಗಳಲ್ಲಿ ಅವುಗಳಿಗೆ ಜಗ್ಗುತ್ತಿಲ್ಲ ಎನ್ನುತ್ತಾರೆ ಬೆಳೆಗಾರರು. ಮಂಗಗಳು ಬೆಳೆಗಾರರ ಮೇಲೆಯೇ ದಾಳಿ ನಡೆಸಿದ ಪ್ರಕರಣಗಳೂ ಒಂದೆರಡು ನಡೆದಿವೆ.
ಮನೆಯ ಮೇಲಿನ ಡಿ.ಟಿ.ಎಚ್. ಡಿಶ್ ಆ್ಯಂಟನಾ, ಡಿಶ್ ಕೇಬಲ್ಗಳು, ವಾಟರ್ ಟ್ಯಾಂಕ್, ನಲ್ಲಿ, ಅಂಗಡಿಗಳ ಬೋರ್ಡುಗಳು, ಸಿ.ಸಿ. ಟಿವಿ ಕ್ಯಾಮೆರಾ ಇನ್ನಿತರ ವಸ್ತುಗಳನ್ನು ಹಾಳುಗೆಡವುತ್ತಿವೆ. ಮನೆಯ ಅಂಗಳದವರೆಗೂ ಕಾಲಿಡುವ ಮಂಗಗಳು ಕೆಲವು ಕಡೆಗಳಲ್ಲಿ ಮನೆಗಳ ಒಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿನ್ನುವಷ್ಟು ಮುಂದುವರಿದಿವೆ ಎನ್ನುತ್ತಾರೆ ನಾಗರಿಕರು. ವನ್ಯಜೀವಿಗಳ ಉಪಟಳದಿಂದ ಬೆಳೆಹಾನಿ ಸಂಭವಿಸಿದಲ್ಲಿ ಸರ್ಕಾರದಿಂದ ನಷ್ಟ ಪರಿಹಾರ ಪಡೆಯಬಹುದು. ಮಂಗಗಳನ್ನು ವನ್ಯ ಜೀವಿ ಎಂದು ಹೇಳಲಾಗುತ್ತಿದ್ದರೂ ಸರ್ಕಾರ ಮಂಗಗಳನ್ನು ವನ್ಯಜೀವಿ ಎಂದು ಒಪ್ಪುತ್ತಿಲ್ಲ. ಹೀಗಾಗಿ ಮಂಗಗಳ ಹಾವಳಿಯಿಂದ ನಷ್ಟಕ್ಕೊಳಗಾದ ರೈತರಿಗೆ ಪರಿಹಾರವೂ ಸಿಗುತ್ತಿಲ್ಲ ಎಂದೂ ಹೇಳುತ್ತಾರೆ.