Karavali
ಕುಂದಾಪುರದಲ್ಲಿ ಅ.26 ರಂದು ಕೆ.ಎಂ.ಸಿಯ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಉದ್ಟಾಟನೆ
- Thu, Oct 23 2025 05:09:10 PM
-
ಕುಂದಾಪುರ,ಅ. 23 (DaijiworldNews/ AK): ಆರೋಗ್ಯ ಸೇವೆಯ ಲಭ್ಯತೆಯನ್ನು ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳಲ್ಲಿ ಬಲಗೊಳಿಸುವ ಉದ್ದೇಶದಿಂದ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವು ಕುಂದಾಪುರದ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರವನ್ನು ವಿಸ್ತರಿಸಲಿದೆ. ಅಕ್ಟೋಬರ್ 26ರಂದು ಈ ಕೇಂದ್ರ ಉದ್ಘಾಟನೆಗೊಳ್ಳಲಿದೆ.

ಇನ್ನು ಮುಂದೆ ಕೆ.ಎಂ.ಸಿ ಆಸ್ಪತ್ರೆಯ ತುರ್ತು ವಿಭಾಗದ ತಜ್ಞರ ಸೇವೆಯನ್ನು ಕುಂದಾಪುರದ ಜನರು ಶ್ರೀ ಸಾಯಿ ಆಸ್ಪತ್ರೆಯಲ್ಲಿ ಪಡೆದುಕೊಳ್ಳಲಿದ್ದಾರೆ. ಈ ನಡೆಯು ವೈದ್ಯಕೀಯ ಸೇವೆಯನ್ನು ಮತ್ತಷ್ಟು ವಿಸ್ತರಿಸಿ, ಗೋಲ್ಡನ್ ಅವರ್ ( ತುರ್ತು ಸಮಯದಲ್ಲಿ) ರೋಗಿಯನ್ನು ರಕ್ಷಿಸುವಲ್ಲಿ ಹಾಗೂ ಸೂಕ್ತ ಚಿಕಿತ್ಸೆ ಒದಗಿಸುವಲ್ಲಿ ನೆರವಾಗಲಿದೆ ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ರ್ತು ಚಿಕಿತ್ಸಾ ವಿಭಾಗದ ಕ್ಲಸ್ಟರ್ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್ ಹೇಳಿದರು.
ಅವರು ಕುಂದಾಪುರ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪುತ್ತೂರು, ಕಕ್ಕಿಂಜೆ, ಬೆಳ್ತಂಗಡಿ ಮತ್ತು ಕೇರಳದಲ್ಲಿ ನಾವು ತುರ್ತು ಚಿಕಿತ್ಸಾ ಘಟಕವನ್ನು ಹೊಂದಿದ್ದೇವೆ. ಹಲವಾರು ಹೃದಯಾಘಾತ, ಸ್ಟ್ರೋಕ್, ಟ್ರಾಮಾ, ಪಾಲಿ ಟ್ರಾಮಾ, ಹಾವು ಕಡಿತ, ವಿಷ ಸೇವನೆ, ಮಕ್ಕಳ ತುರ್ತು ಚಿಕಿತ್ಸೆ ಮತ್ತು ಹಲವು ತುರ್ತು ವೈದ್ಯಕೀಯ ಪ್ರಕರಣಗಳನ್ನು ಸ್ಥಿರಗೊಳಿಸಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡಿ ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ತಕ್ಷಣ ಹಾಗೂ ಸರಿಯಾದ ಸಮಯದಲ್ಲಿ ತುರ್ತು ಚಿಕಿತ್ಸೆ ಒದಗಿಸುವ ಮೂಲಕ ರೋಗಿಯ ಸಮಸ್ಯೆಯನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿರುತ್ತದೆ. ಮಲ್ಟಿ ಸ್ಪೆಷಾಲಿಟಿ ಚಿಕಿತ್ಸೆ ಅಗತ್ಯವಿದ್ದಲ್ಲಿ, ಕಾರ್ಡಿಯಾಕ್, ನ್ಯೂರೊ ಮಕ್ಕಳ ಅಥವಾ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಯನ್ನು ಮುಂದಿನ ಚಿಕಿತ್ಸೆಗಾಗಿ ಉನ್ನತ ಮಟ್ಟದ ವೈದ್ಯಕೀಯ ಆರೈಕೆಗೆ ವರ್ಗಾಯಿಸಲಾಗುವುದು. ಅಲ್ಲಿ ಉತ್ತಮವಾದ ಬಹು ವಿಭಾಗದ ಆರೈಕೆಯನ್ನು ನೀಡಲಾಗುತ್ತದೆ" ಎಂದರು.
ಕುಂದಾಪುರದ ಶ್ರೀ ಸಾಯಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ರಂಜನ್ ಶೆಟ್ಟಿ ಮಾತನಾಡಿ, "ಕೆಎಂಸಿ ಆಸ್ಪತ್ರೆಯಿಂದ ಎಮರ್ಜೆನ್ಸಿ ಮೆಡಿಸಿನ್ ತಂಡ ಇಲ್ಲಿಗೆ ಆಗಮಿಸುತ್ತಿದೆ. ಈ ಭಾಗಕ್ಕೆ ಇದು ತುರ್ತು ಅಗತ್ಯವಾಗಿದ್ದು, ಕುಂದಾಪುರ, ಬೈಂದೂರು ತಾಲೂಕಿಗೆ ಹೆಚ್ಚು ಅನುಕೂಲವಾಗುತ್ತದೆ. ಸ್ಟ್ರೋಕ್, ಹೃದಯಾಘಾತ, ವಿಷ ಸೇವನೆ, ಮಕ್ಕಳ ತುರ್ತು ಪ್ರಕರಣಗಳು ಮತ್ತು ರಸ್ತೆ ಅಪಘಾತ ಮುಂತಾದ ಪ್ರಕರಣಗಳನ್ನು ಪಡೆಯುತ್ತಿದ್ದೇವೆ. ಈ ಪಾಲುದಾರಿಕೆಯು ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಗಳ ಆರೈಕೆಯ ವ್ಯವಸ್ಥೆಯನ್ನು ಸುಧಾರಿಸುವುದಲ್ಲದೆ, ಸಮುದಾಯದ ಆರೋಗ್ಯ ಅಗತ್ಯಗಳನ್ನು ಪೂರೈಸಲು ನಮ್ಮ ಆಸ್ಪತ್ರೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದರು.
ಶ್ರೀ ಸಾಯಿ ಆಸ್ಪತ್ರೆಗೆ ಸೇರ್ಪಡೆಯಾಗುತ್ತಿರುವ ಈ ತುರ್ತು ವೈದ್ಯಕೀಯ ಕೇಂದ್ರವು ತುರ್ತು ಪರಿಸ್ಥಿತಿ ಸಮಯದಲ್ಲಿ ದೂರ ಪ್ರಯಾಣ ಮಾಡದೇ ಹತ್ತಿರದಲ್ಲೇ ಚಿಕಿತ್ಸೆ ಪಡೆಯುವ ಸೌಲಭ್ಯ ಕಲ್ಪಿಸಿದೆ. ಗೋಲ್ಡನ್ ಅವರ್ ಸಮಯದಲ್ಲಿ ತಕ್ಷಣದ ಚಿಕಿತ್ಸೆ ನೀಡಿ ರೋಗಿಯು ಗುಣಮುಖನಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಗೋಲ್ಡನ್ ಅವರ್ ಎನ್ನುವುದು ವ್ಯಕ್ತಿಯ ಬದುಕಿಸಲು ಹೆಚ್ಚು ಮಹತ್ವದ್ದಾಗಿದೆ ಎಂದರು.
ಶ್ರೀ ಸಾಯಿ ಆಸ್ಪತ್ರೆಯು ಈಗ24/7 ತುರ್ತು ವೈದ್ಯಕೀಯ ಸೇವೆ ಒದಗಿಸಲು ಎಲ್ಲಾ ಸೌಕರ್ಯವನ್ನು ಹೊಂದಿದೆ.
ತರಬೇತಿ ಪಡೆದ ತುರ್ತು ತಜ್ಞ ವೈದ್ಯರು ಟ್ರಾಮಾ (ಆಘಾತ), ಕಾರ್ಡಿಯಾಕ್, ನರ ಸಂಬಂಧಿತ ಸಮಸ್ಯೆ, ಪಾಲಿ ಟ್ರಾಮಾ ಮತ್ತು ಇನ್ನಿತರ ತುರ್ತು ವೈದ್ಯಕೀಯ ಪರಿಸ್ಥಿತಿ ನಿಭಾಯಿಸಲು ಲಭ್ಯವಿರುತ್ತಾರೆ. ಈ ಪಾಲುದಾರಿಕೆಯು ಸುಗಮವಾದ, ಮುಂದುವರಿದ ವೈದ್ಯಕೀಯ ಸೇವೆಯನ್ನು ಗ್ರಾಮೀಣ ಭಾಗದ ಜನರಿಗೆ ಒದಗಿಸಲು ನೆರವಾಗಲಿದೆ. ಜೊತೆಗೆ ರೋಗಿಗಳು ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಜೀವ ರಕ್ಷಕ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.
ಶ್ರೀ ಸಾಯಿ ಆಸ್ಪತ್ರೆಯು ತುರ್ತು ಮತ್ತು ಕ್ರಿಟಿಕಲ್ ಕೇರ್ ಸೇವೆ, ಐಸಿಯು (ಇಂಟೆನ್ಸಿವ್ ಕೇರ್ ಯುನಿಟ್), ಆಪರೇಶನ್ ಥಿಯೇಟರ್, ಎಕ್ಸ್ ರೇ, ಡಯಾನ್ನೊಸ್ಟಿಕ್ ಲ್ಯಾಬೊರೇಟರಿ, ಫಿಸಿಯೊಥೆರಪಿ ವಿಭಾಗ, ಸ್ಕ್ಯಾನಿಂಗ್ ಮತ್ತು ಇಮೇಜಿಂಗ್ ಸೇವೆ, ವಿಶೇಷ ವಾರ್ಡ್ ಮತ್ತು ಡಿಲಕ್ಸ್ ರೂಮ್, ಮಹಿಳೆ ಮತ್ತು ಪುರುಷರ ಜನರಲ್ ವಾರ್ಡ್, ಡೇ ಕೇರ್ ಯುನಿಟ್ ಸೇರಿ ಹಲವು ಸೌಲಭ್ಯಗಳನ್ನು ಹೊಂದಿದೆ ಎಂದರು.
ಉದ್ಘಾಟನೆ: ಅಕ್ಟೋಬರ್ 26 ರವಿವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ನಡೆಯಲಿದೆ. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಜಯಕರ ಶೆಟ್ಟಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಉಡುಪಿ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂದಾಪುರ ಉಪ ವಿಭಾಗದ ರಶ್ಮಿ ಎಸ್.ಆರ್., ಉಡುಪಿ ಯೂನಿಯನ್ ಬ್ಯಾಂಕ್ ಪ್ರಾದೇಶಿಕ ಮಖ್ಯಸ್ಥರಾದ ಅಶೋಕ ಭಾಂಡಗೆ, ಮಂಗಳೂರು ಕೆ.ಎಂ.ಸಿ ಆಸ್ಪತ್ರೆ ಪ್ರಾದೇಶಿಕ ಸಿಇಒ ಸಘೀರ್ ಸಿದ್ಧಿಖಿ, ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇಲ್ಲಿನ ತುರ್ತು ವಿಭಾಗದ ಮುಖ್ಯಸ್ಥರಾದ ಡಾ.ಜೀದು ರಾಧಾಕೃಷ್ಣನ್, ಕುಂದಾಪುರ ತಾಲೂಕು ಆರೋಗ್ಯಧಿಕಾರಿ ಡಾ.ಪ್ರೇಮಾನಂದ, ಕುಂದಾಪುರ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷರಾದ ಡಾ.ಬಾಲಕೃಷ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮಂಗಳೂರು ಕೆಎಂಸಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಮ್ಯಾನೇಜರ್ ರಾಕೇಶ್ ಮಾತನಾಡಿ, ಕುಂದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ಬೈಂದೂರು, ಕೊಲ್ಲೂರು, ಸಾಸ್ತಾನ, ಸಾಲಿಗ್ರಾಮ, ತೆಕ್ಕಟ್ಟೆ, ಕುಂಭಾಶಿ, ತಲ್ಲೂರು, ಭಟ್ಕಳ ಹೊನ್ನಾವರ ಹೊನ್ನಾವರ ಕುಮಟಾ ಭಾಗದಲ್ಲಿ ಆರೋಗ್ಯ ಸೇವೆಯ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಗುಣಮಟ್ಟದ ಆರೋಗ್ಯ ಸೇವೆ ನೀಡುವ ಕೆಎಂಸಿ ಆಸ್ಪತ್ರೆಯ ಬದ್ಧತೆಗೆ ಇದೊಂದು ಮೈಲಿಗಲ್ಲು. ಶ್ರೀ ಸಾಯಿ ಆಸ್ಪತ್ರೆಗೆ ನಮ್ಮ ತಜ್ಞರ ತಂಡ ಮತ್ತು ಮೂಲಸೌಕರ್ಯವನ್ನು ನೀಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ತ್ವರಿತ ಸೇವೆ ಮತ್ತು ತುರ್ತು ವೈದ್ಯಕೀಯ ಸೇವೆಯ ಉತ್ತಮ ಸೌಲಭ್ಯವನ್ನು ಕಲ್ಪಿಸಿದ್ದೇವೆ" ಎಂದರು.