ಉಡುಪಿ, ಫೆ. 23 (DaijiworldNews/AA): ನಗರದ ಜನನಿಬಿಡ ಪ್ರದೇಶವಾದ ಕಲ್ಸಂಕ ಸರ್ಕಲ್ನಲ್ಲಿ ಭಾನುವಾರ ಸಂಜೆ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ನಗರ ಠಾಣೆಯ ಪೊಲೀಸರು ಮತ್ತು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಕ್ಷಿಪ್ರ ಕಾರ್ಯಾಚರಣೆಯಿಂದ ದೊಡ್ಡ ದುರಂತವೊಂದು ತಪ್ಪಿದೆ.



ಅಪರಿಚಿತ ವ್ಯಕ್ತಿಯೊಬ್ಬ ಬಾಟಲಿಯಲ್ಲಿ ಪೆಟ್ರೋಲ್ ಹಿಡಿದು ಸ್ಥಳಕ್ಕೆ ಆಗಮಿಸಿ, ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈತ ಮದ್ಯದ ಅಮಲಿನಲ್ಲಿದ್ದನೇ ಅಥವಾ ಮಾನಸಿಕ ಅಸ್ವಸ್ಥನೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಸಂಚಾರ ದಟ್ಟಣೆ ಹೆಚ್ಚಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು, ಸಂಚಾರ ನಿಯಂತ್ರಣದಲ್ಲಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಯುಂಟಾಗಿತ್ತು. ಪೊಲೀಸರು ಮೊದಲ ಬಾರಿ ಆತನ ಕೈಲಿದ್ದ ಪೆಟ್ರೋಲ್ ಬಾಟಲಿಯನ್ನು ಕಸಿದುಕೊಂಡಿದ್ದರು. ಆದರೆ, ಆತ ಮತ್ತೆ ಪೆಟ್ರೋಲ್ ತುಂಬಿದ ಮತ್ತೊಂದು ಬಾಟಲಿಯೊಂದಿಗೆ ಹಿಂತಿರುಗಿ, ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಕೂಗಾಡಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ಸಿಬ್ಬಂದಿ ಆತ ಬೆಂಕಿ ಹಚ್ಚಿಕೊಳ್ಳದಂತೆ ತಡೆದು, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ನಂತರ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದು, ಕೌನ್ಸೆಲಿಂಗ್ ನಡೆಸಿದ್ದಾರೆ. ಬಳಿಕ ಆತನನ್ನು ಆತನ ಸ್ವಂತ ಊರಾದ ಗದಗಕ್ಕೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಿದ್ದಾರೆ.
ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ನಾರಾಯಣ್ ಮತ್ತು ಗಂಗಪ್ಪ ಅವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಂಡಿದ್ದಾರೆ.