ಮಂಗಳೂರು, ಫೆ. 27 (DaijiworldNews/TA): ತುಳುನಾಡಿನ ದೈವಾರಾಧನೆಯ ನೆಲೆವೀಡುಗಳಲ್ಲಿ ಮುತ್ತಪ್ಪನ್ ದೈವದ ಆರಾಧನೆ ಕೊಂಚ ವಿರಳವಾಗಿ ಕಾಣುತ್ತದೆ. ಆದರೆ ಮಂಗಳೂರಿನ ಶಕ್ತಿನಗರ ಮತ್ತು ಸೆಂಟ್ರಲ್ ರೈಲು ನಿಲ್ದಾಣ ಪ್ರದೇಶಗಳಲ್ಲಿ ಮುತ್ತಪ್ಪನ್ ಆರಾಧನೆ ನಡೆಯುತ್ತಿದೆ. ಈ ಬಾರಿ ಶಕ್ತಿನಗರದ ಶ್ರೀಮುತ್ತಪ್ಪ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಇತ್ತೀಚೆಗೆ ನಡೆಯಿತು.

1972ರಿಂದ, ಉದ್ಯೋಗ ನಿಮಿತ್ತ ಮಂಗಳೂರಿಗೆ ಬಂದ ಕೇರಳ ಮೂಲದ ಭಕ್ತರು ತಮ್ಮ ಆರಾಧ್ಯ ದೈವ ಮುತ್ತಪ್ಪನ್ ಪೂಜೆ ಆರಂಭಿಸಿದರು. ಲಕ್ಷ್ಮಣ್ ಎಂಬ ಭಕ್ತನಿಂದ ಕುದ್ರೋಳಿ ಬಳಿ ಒಂದು ಫೋಟೋದೊಂದಿಗೆ ಆರಂಭವಾದ ಆರಾಧನೆ, ಅವರ ಅನಾರೋಗ್ಯದ ನಂತರ ಶಕ್ತಿನಗರದ ಕುರುಚಲು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಗೊಂಡಿತು. ಸಣ್ಣ ಮಟ್ಟದಲ್ಲಿ ಆರಂಭವಾದ ಪೂಜೆ, ಕಾಲಕ್ರಮೇಣ ಸಂಘಟಿತ ರೂಪ ಪಡೆಯಿತು.
25 ವರ್ಷಗಳ ಹಿಂದೆ ನಡೆದ ನವೀಕರಣದಲ್ಲಿ ನವದುರ್ಗೆ ಮತ್ತು ಅಯ್ಯಪ್ಪನ ಪ್ರತಿಷ್ಠಾಪನೆ ನೆರವೇರಿತು. ಇತ್ತೀಚೆಗೆ ನಡೆದ ತಾಂಬೂಲ ಪರಿಶೀಲನೆ ಬಳಿಕ ಕ್ಷೇತ್ರವನ್ನು ಮುತ್ತಪ್ಪನ್ ಮತ್ತು ತಿರುವಪ್ಪನ್ ಆರಾಧನೆಗೆ ಮಾತ್ರ ಸೀಮಿತಗೊಳಿಸಿ, ನೂತನ ಗುಡಿ ನಿರ್ಮಿಸಿ ಬ್ರಹ್ಮಕಲಶ ವೈಭವದೊಂದಿಗೆ ಪೂಜೆ ನಡೆಯಿತು.
ಈ ಪೂಜೆಯಲ್ಲಿ, ಕೇರಳದ ಪರಶ್ಶಿನಿ ಕಡವಿನಂತೆ ಮುತ್ತಪ್ಪನ್ ದೈವಕ್ಕೆ ಪ್ರೀತಿಯ ಶೇಂದಿ, ಒಣ ಮೀನು, ಕಡಲೆ, ಅಲಸಂಡೆ ಬೀಜ, ತೆಂಗಿನಕಾಯಿ ಸೇರಿಸಿ ಪಯಂಗುಟ್ಟಿ ನೈವೇದ್ಯವಾಗಿ ಅರ್ಪಿಸಲಾಗಿದೆ. ದೈವಕ್ಕೆ ಪ್ರೀತಿಯಿಂದ ಶ್ವಾನಗಳು ಗುಡಿಯೊಳಗೆ ಮುಕ್ತವಾಗಿ ವಿಹರಿಸುವಂತೆ ಅವಕಾಶ ನೀಡಲಾಗಿದೆ.
ನೂತನ ಗುಡಿಯಲ್ಲಿ ಕೇರಳದಿಂದ ನಿಶ್ಚಿತ ಸಮುದಾಯದ ಭಕ್ತರನ್ನು ಕರೆಸಿ ಮುತ್ತಪ್ಪನ್, ತಿರುವಪ್ಪನ್ ಹಾಗೂ ಗುಳಿಗ ದೈವಗಳಿಗೆ ವೆಳ್ಳಾಟ ನಡೆಸಲಾಗಿದ್ದು, ಮಂಗಳೂರಿನ ಭಕ್ತರು ತಮ್ಮ ಊರಿನಲ್ಲೇ ವೆಳ್ಳಾಟವನ್ನು ಕಣ್ತುಂಬಿಕೊಂಡರು. ತುಳುನಾಡಿನಲ್ಲಿಯೂ ಕೇರಳದ ದೈವಗಳಿಗೆ ವಿಶೇಷ ಸ್ಥಾನ ದೊರಕಿರುವುದು, ಸ್ಥಳೀಯರ ದೈವಗಳ ಮೇಲಿನ ಭಕ್ತಿ ಮತ್ತು ಪ್ರೀತಿಯ ಸಂಕೇತವಾಗಿದೆ.