ಮಂಗಳೂರು, ಫೆ. 27 (DaijiworldNews/AK): ಮಂಗಳೂರು ಮತ್ತು ಉಡುಪಿ ಭಾಗದ ಕಾಲೇಜುಗಳಿಂದ ಪದವಿ ಪಡೆದ ನೂರಾರು ಐಟಿ ವೃತ್ತಿಪರರು ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ಮಹಾನಗರಗಳತ್ತ ವಲಸೆ ಹೋಗಬೇಕಾದ ಅನಿವಾರ್ಯತೆಯಾಗಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಭಾರತದ ಸಿಲಿಕಾನ್ ಬೀಚ್ ಎಂದು ಕರೆಯಲಾಗುತ್ತಿರುವ ಮಂಗಳೂರು, ಉಡುಪಿ ವಲಯದಲ್ಲೇ, ಮನೆ ಹತ್ತಿರವೇ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿದ್ದು, ಕರಾವಳಿ ಕರ್ನಾಟಕ ಹೊಸ ತಂತ್ರಜ್ಞಾನ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.

ಐಟಿ ಆದಾಯದಲ್ಲಿ ಏರಿಕೆ
ಕಳೆದ ಎರಡು ವರ್ಷಗಳಲ್ಲಿ ಮಂಗಳೂರು–ಉಡುಪಿ ವಲಯದ ಐಟಿ ಆದಾಯವು ಸುಮಾರು 3,200 ಕೋಟಿ ರೂ.ಗಳಿಂದ 5,000 ಕೋಟಿ ರೂ.ಗಳತ್ತ ವೇಗವಾಗಿ ಬೆಳೆಯುತ್ತಿದೆ. ಇದರಲ್ಲಿ ಅಂದಾಜು 3,000 ಕೋಟಿ ರೂ.ಗಳು ಐಟಿ ವೃತ್ತಿಪರರ ವೇತನ ರೂಪದಲ್ಲಿ ಸ್ಥಳೀಯ ಆರ್ಥಿಕತೆಗೆ ನೇರವಾಗಿ ಹರಿದುಬರುತ್ತಿವೆ. ಇದರಿಂದ ರಿಯಲ್ ಎಸ್ಟೇಟ್, ಸೇವಾ ಕ್ಷೇತ್ರ, ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಿದೆ.
ಜಾಗತಿಕ ಕಂಪನಿಗಳ ಗಮನ ಸೆಳೆದ ಕರಾವಳಿ
ಕಳೆದ ಮೂರು ವರ್ಷಗಳಲ್ಲಿ ಈ ಪ್ರದೇಶದ ತಂತ್ರಜ್ಞಾನ ಸಂಸ್ಥೆಗಳ ಪೈಕಿ ಮೂರು ಕಂಪನಿಗಳನ್ನು ಜಾಗತಿಕ ನಿಗಮಗಳು ಸುಮಾರು 100 ಮಿಲಿಯನ್ ಮೌಲ್ಯದ ಒಪ್ಪಂದಗಳಲ್ಲಿ ಸ್ವಾಧೀನಪಡಿಸಿಕೊಂಡಿವೆ. ಉದ್ಯಮಶೀಲತೆ ಮತ್ತು ಶಿಕ್ಷಣದ ಶ್ರೀಮಂತ ಪರಂಪರೆ ಐತಿಹಾಸಿಕವಾಗಿ, ಮಂಗಳೂರು ಕೇಂದ್ರವಾಗಿರುವ ಇಂದಿನ ದಕ್ಷಿಣ ಕನ್ನಡ ಜಿಲ್ಲೆ ಹಿಂದೆ ದಕ್ಷಿಣ ಕೆನರಾ ಜಿಲ್ಲೆಯಾಗಿತ್ತು. ಉದ್ಯಮಶೀಲತೆ ಮತ್ತು ಶಿಕ್ಷಣದಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿರುವ ಊರಿದು ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದ ಬಲವಾದ ನೆಲೆಯನ್ನು ಕೂಡ ಹೊಂದಿದೆ. ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಈ ಪ್ರದೇಶದಲ್ಲಿ ಪ್ರತಿ ವರ್ಷ ಸುಮಾರು 60,000 ಪದವೀಧರರು ಹೊರಬರುತ್ತಿದ್ದಾರೆ. ಇದರಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳೂ ಸೇರಿದ್ದಾರೆ.
ಬಿಯಾಂಡ್ ಬೆಂಗಳೂರು’ ಯೋಜನೆಯ ಫಲ
ಬೆಂಗಳೂರು ಸಂಚಾರ ದಟ್ಟಣೆ ಮತ್ತು ದುಬಾರಿ ಜೀವನ ಶೈಲಿಯಿಂದ ಬೇಸತ್ತ ಐಟಿ ಉದ್ಯೋಗಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಈಗ ಕರಾವಳಿ ಕರ್ನಾಟಕದತ್ತ ಮುಖ ಮಾಡುತ್ತಿವೆ. ಕರ್ನಾಟಕ ಸರ್ಕಾರದ ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಮಂಗಳೂರು ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಐಟಿ ಪಾರ್ಕ್ ನಿರ್ಮಾಣಕ್ಕೆ ಸಬ್ಸಿಡಿ, ಬಾಡಿಗೆ ರಿಯಾಯಿತಿ ಸೇರಿದಂತೆ ಹಲವು ಪ್ರೋತ್ಸಾಹಕ ಕ್ರಮಗಳು ಕಂಪನಿಗಳನ್ನು ಆಕರ್ಷಿಸುತ್ತಿವೆ. ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮಂಗಳೂರನ್ನು ಮುಂದಿನ ಪ್ರಮುಖ ಟೆಕ್ ಹಬ್ ಎಂದು ಗುರುತಿಸಿ ಉತ್ತೇಜನ ನೀಡುತ್ತಿದ್ದಾರೆ.
ವರ್ಕ್ ಫ್ರಮ್ ಹೋಮ್
ಕೋವಿಡ್ ಸಮಯದಲ್ಲಿ ಮಂಗಳೂರು–ಉಡುಪಿ ಭಾಗದ ಸುಮಾರು 1 ರಿಂದ 1.5 ಲಕ್ಷ ಐಟಿ ವೃತ್ತಿಪರರು ತಮ್ಮ ಊರುಗಳಿಗೆ ವಾಪಾಸದರು. ಬಳಿಕ. ಶಾಂತಿಯುತ ವಾತಾವರಣ, ಉತ್ತಮ ಜೀವನ ಗುಣಮಟ್ಟ ಮತ್ತು ಕುಟುಂಬದ ಹತ್ತಿರ ಇರುವ ಅವಕಾಶದಿಂದ ಅನೇಕರು ಇಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ಕಂಪನಿಗಳು ಮತ್ತೆ ಬೆಂಗಳೂರಿಗೆ ಕರೆಯುತ್ತಿದ್ದರೂ, ಹಲವರು ಮಂಗಳೂರಿನಲ್ಲೇ ಉದ್ಯೋಗ ಆಯ್ಕೆ ಮಾಡುತ್ತಿದ್ದಾರೆ. ಮಾತ್ರವಲ್ಲ ಕೆಲವರು ಕೆಲಸ ಬದಲಿಸಿ ಮಂಗಳೂರಿನಲ್ಲೇ ಕೆಲಸ ಹುಡುಕುತ್ತಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ 40ಕ್ಕೂ ಹೆಚ್ಚು ಐಟಿ ಕಂಪನಿಗಳು ಇಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಇದರ ಪರಿಣಾಮವಾಗಿ, 2023ರಲ್ಲಿ ಸುಮಾರು 15,000 ಇದ್ದ ಐಟಿ ಉದ್ಯೋಗಿಗಳ ಸಂಖ್ಯೆ ಇಂದು 30,000ಕ್ಕೆ ಏರಿಕೆಯಾಗಿದೆ. 2035ರ ವೇಳೆಗೆ ಮಂಗಳೂರು ಸಂಪೂರ್ಣವಾಗಿ ಬದಲಾವಣೆಗೊಂಡು, ರಾಜ್ಯದ ಎರಡನೇ ಅತಿ ದೊಡ್ಡ ಐಟಿ ಹಬ್ ಆಗಿ, ಐಟಿ ವೃತ್ತಿಪರರ ನೆಚ್ಚಿನ ತಾಣವಾಗಿ ಹೊರಹೊಮ್ಮಲಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.