ಕುಂದಾಪುರ, ಮಾ. 01 (DaijiworldNews/TA): ಸೋಲು-ಗೆಲುವು ಸ್ಪರ್ಧೆಗಳಲ್ಲಿ ಸಹಜ. ಸೋಲೇ ಗೆಲುವಿನ ಮೆಟ್ಟಿಲು. ವಿದ್ಯಾರ್ಥಿಗಳಲ್ಲಿ ನಿಶ್ಚಿತವಾದ ಗುರಿ ಇರಬೇಕು. ನಮ್ಮೊಳಗಿನ ಗುರಿ ಗಟ್ಟಿಯಾಗಿದ್ದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಚಿತ್ರನಟ ಪ್ರಕಾಶ್ ತುಮಿನಾಡು ಹೇಳಿದರು.


ಅವರು ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ನಡೆದ ರಾಜ್ಯ ಮಟ್ಟದ ಅಂತರ್ ಕಾಲೇಜು ಮ್ಯಾನೇಜ್ಮೆಂಟ್ ಮತ್ತು ಕಲ್ಚರಲ್ ಫೆಸ್ಟ್ ಯುವ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಐಎಂಜೆ ಇನ್ಸ್ಟಿಟ್ಯೂಟ್ ಶೈಕ್ಷಣಿಕ ನಿರ್ದೇಶಕ ಡಾ.ಎಸ್.ಎನ್ ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ತರಗತಿಯೊಳಗಿನ ಶಿಕ್ಷಣದ ಜೊತೆಯಲ್ಲಿ ಸಾಂಸ್ಕೃತಿಕ ವಿಕಸನ, ವ್ಯವಹಾರ ಕೌಶಲ್ಯ, ನಾಯಕತ್ವ, ಸೃಜನಾತ್ಮಕ ಚಟುವಟಿಕೆಗಳಿಗೆ ಒತ್ತನ್ನು ಸಂಸ್ಥೆ ನೀಡುತ್ತಾ ಬಂದಿದೆ. ವಿಶ್ವದ ಬೇಡಿಕೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗಡೆ ಮಾತನಾಡಿ, 2004ರಲ್ಲಿ ಐ.ಎಂ. ಜಯರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಇಲ್ಲಿ ಇಂಜಿನಿಯರಿಂಗ್ ಕಾಲೇಜು ಆರಂಭವಾಯಿತು. 2008ರಲ್ಲಿ ಎಂಬಿಎ ಆರಂಭವಾಯಿತು. 18 ವರ್ಷಗಳಿಂದ ಇಲ್ಲಿ ಎಂಬಿಎ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇವತ್ತು ವಿಶ್ವದ ಬೇರೆ ಬೇರೆ ಕಡೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಸಿದ್ದಾರ್ಥ ಜೆ.ಶೆಟ್ಟಿಯವರು ಸಂಸ್ಥೆಯ ಚೇರ್ಮೆನ್ ಆಗಿ ಮುನ್ನೆಡೆಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪ್ರಕಾಶ ತುಮಿನಾಡು ಅವರನ್ನು ಸನ್ಮಾನಿಸಲಾಯಿತು. ಬಳಿಕ ಅಂತರ್ ಕಾಲೇಜು ಮ್ಯಾನೇಜ್ ಮೆಂಟ್ ಹಾಗೂ ಕಲ್ಚರಲ್ ಸ್ಪರ್ಧೆಗಳು ನಡೆದವು.