ಮಂಗಳೂರು, ಮಾ. 01 (DaijiworldNews/TA): ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉರ್ವ ಶ್ರೀ ಮಾರಿಗುಡಿ ದೇಗುಲದಲ್ಲಿ ವಾರ್ಷಿಕ ಜಾತ್ರೋತ್ಸವ ಮಾ.9ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಜಾತ್ರೆ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಸಾಂಪ್ರದಾಯಿಕವಾಗಿ “ಪ್ರಸಾದ ಹಾರಿಸುವ” ವಿಧಿ ನೆರವೇರಿಸಲಾಯಿತು.

ಪ್ರಸಾದ ಹಾರಿಸುವ ಸಂಪ್ರದಾಯಕ್ಕೆ ವಿಶೇಷ ಧಾರ್ಮಿಕ ಮಹತ್ವವಿದೆ. ಈ ವಿಧಿ ನೆರವೇರಿದ ಬಳಿಕ ಉರ್ವ ಮಾರಿಗುಡಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಮದುವೆ, ಗೃಹಪ್ರವೇಶ ಸೇರಿದಂತೆ ಶುಭಕಾರ್ಯಗಳನ್ನು ನಡೆಸುವುದಿಲ್ಲ ಎಂಬ ಆಚರಣೆ ಇದೆ. ಅಲ್ಲದೆ ಈ ಪ್ರದೇಶದ ಹಿಂದೂ ಕುಟುಂಬಗಳು ಕೋಳಿ ಕುಯ್ದು ಪದಾರ್ಥ ತಯಾರಿಸುವುದು ಹಾಗೂ ಕಡುಬು (ಪುಂಡಿ) ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತಾರೆ ಎಂಬ ನಂಬಿಕೆಯೂ ಇದೆ.
ಕುದ್ರೋಳಿಯಿಂದ ಕುಂಜತ್ತಬೈಲ್ವರೆಗೆ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ವ್ಯಾಪ್ತಿ ವಿಸ್ತರಿಸಿದೆ. ಈ ಭಾಗದ ಬ್ರಾಹ್ಮಣೇತರ ಹಿಂದೂ ಸಮುದಾಯಕ್ಕೆ ಉರ್ವ ಜಾತ್ರೆ ಅತ್ಯಂತ ವಿಶೇಷ ಹಬ್ಬವಾಗಿ ಪರಿಗಣಿಸಲಾಗಿದೆ. ಪ್ರಸಾದ ಹಾರಿಸಿದ ಹತ್ತು ದಿನಗಳ ಬಳಿಕ ಜಾತ್ರೋತ್ಸವ ಆರಂಭಗೊಳ್ಳುವುದು ಸಂಪ್ರದಾಯ. ಸಾಮಾನ್ಯವಾಗಿ ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಜಾತ್ರೆ ನಡೆಯುತ್ತದೆ. ತಿಂಗಳು ಮತ್ತು ವಾರದಲ್ಲಿ ಸ್ವಲ್ಪ ಬದಲಾವಣೆ ಇರಬಹುದಾದರೂ, ಜಾತ್ರೆಯ ಪ್ರಮುಖ ದಿನಗಳು ಎಂದಿಗೂ ಸೋಮವಾರ ಮತ್ತು ಮಂಗಳವಾರವೇ ಆಗಿರುತ್ತವೆ. ಈ ಪರಂಪರೆ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂದು ದೇವಸ್ಥಾನ ಆಡಳಿತ ತಿಳಿಸಿದೆ. ಜಾತ್ರೆ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ಭಕ್ತರ ಭಾಗವಹಿಸುವಿಕೆಯಿಂದ ಉರ್ವ ಪ್ರದೇಶದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಲಿದೆ.