ಬಂಟ್ವಾಳ, ಮಾ. 06 (DaijiworldNews/TA): ಎರಡು ದಿನಗಳ ಹಿಂದೆಯಷ್ಟೇ ಬಾರಿ ಸದ್ದು ಮಾಡಿದ್ದ ಆಧಾರ್ ಕಾರ್ಡ್ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಫರಂಗಿಪೇಟೆ ಅಂಚೆ ಇಲಾಖೆ ಮೇಲೆ ಪ್ರಕರಣ ದಾಖಲಾಗಿದೆ.

ಪುದು ಗ್ರಾಮದ ಸುಜೀರ್ ಎಂಬಲ್ಲಿಯ ಪ್ರದೇಶವಾದ ನೇತ್ರಾವತಿ ನದಿ ದಡದಲ್ಲಿ ಮಾ.03 ರಂದು ಸಮಯ ಸಂಜೆ 5.00 ಗಂಟೆಯ ಹೊತ್ತಿಗೆ ಸ್ಥಳೀಯ ನಿವಾಸಿಗಳ 2013 ರಿಂದ 2023 ರವರೇಗಿನ ಅಂದಾಜು 400 ರಿಂದ 500 ಮೂಲ ಆಧಾರ್ ಕಾರ್ಡ್ ಗಳು ಪತ್ತೆಯಾಗಿತ್ತು. ಆಧಾರ್ ಕಾರ್ಡ್ ಪ್ರತಿಗಳಲ್ಲಿ ಫರಂಗಿಪೇಟೆಯ ಪೋಸ್ಟ್ ಆಫೀಸಿನ ಸೀಲ್ ಪತ್ತೆಯಾಗಿದ್ದು, ಮೂಲ ಆಧಾರ್ ಕಾರ್ಡ್ ಪ್ರತಿಗಳು ಸಾರ್ವಜನಿಕರ ಮನೆಗೆ ತಲುಪದೆ, ನೇತ್ರಾವತಿ ನದಿ ತೀರದಲ್ಲಿ ಸಿಕ್ಕಿದಂತಹ ಮೂಲ ಆಧಾರ್ ಪ್ರತಿಗಳು ಪ್ರಸ್ತುತ ಗ್ರಾಮ ಪಂಚಾಯತ್ ಇವರ ಸ್ವಾಧೀನದಲ್ಲಿರುವ ಸತ್ಯ ವಿಚಾರ ಬಹಿರಂಗಗೊಂಡಿದೆ. ಹಾಗಾಗಿ ಸಂಬಂಧಪಟ್ಟ ಅಂಚೆ ಇಲಾಖೆಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಪತ್ರ ಬರೆಯುವಂತೆ ಪಾಣೆಮಂಗಳೂರು ಕಂದಾಯ ನಿರೀಕ್ಷಕರು ಅವರು ತಹಶೀಲ್ದಾರರಿಗೆ ವರದಿ ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ? : ಆಧಾರ್ ಕಾರ್ಡ್ ಗಳಲ್ಲಿ ಫರಂಗಿಪೇಟೆಯ ಪೋಸ್ಟ್ ಆಫೀಸಿನ ಸೀಲ್ ಪತ್ತೆಯಾಗಿರುವುದರಿಂದ ಮತ್ತು ಆಧಾರ್ ಕಾರ್ಡ್ ನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ಅಂಚೆ ಇಲಾಖೆಯವರದ್ದಾಗಿರುತ್ತದೆ. ಆದುದರಿಂದ ಅಂಚೆ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕ ಸೇವಕರಾಗಿದ್ದು, ಈ ದಾಖಲೆಗಳನ್ನು ಸುರಕ್ಷಿತವಾಗಿ ಸಾರ್ವಜನಿಕರಿಗೆ ವಿತರಿಸುವ ಕಾನೂನುತ್ಮಾಕ ಜವಾಬ್ದಾರಿಯನ್ನು ಹೊಂದಿದ್ದರೂ ಮತ್ತು ವೈಯಕ್ತಿಕ ಮಾಹಿತಿ ಸೋರಿಕೆ ಆಗುವ ಸಂಭವ ಇದ್ದರೂ , ಈ ದಾಖಲೆಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬೇಜಾವ್ದಾರಿಯಿಂದ ಬಿಸಾಡಿರುವುದು ಮೇಲ್ನೋಟಕ್ಕೆ ನಂಬಿಕೆ ದ್ರೋಹ ಎಸೆಗಿರುವುದು ಕಂಡು ಬರುತ್ತದೆ. ನಾಗರಿಕರ ಆಧಾರ್ ಕಾರ್ಡ್ನ್ನು ಸುರಕ್ಷಿತವಾಗಿ ನಾಗರಿಕರಿಗೆ ತಲುಪಿಸುವ ಜವಾಬ್ದಾರಿ ಹೊಂದಿದ ಅಂಚೆ ಇಲಾಖೆಯ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.