ಉಡುಪಿ, ಮಾ. 08 (DaijiworldNews/AA): ಮಹಿಳೆ ಎಂದರೆ ಕೇವಲ ಮೃದುತ್ವದ ಪ್ರತಿರೂಪವಲ್ಲ ಅವಳು ಧೈರ್ಯ, ಶಕ್ತಿ ಮತ್ತು ಸಾಧನೆಯ ಜೀವಂತ ಸಂಕೇತ. ಉಡುಪಿ ಜಿಲ್ಲೆಯ ಹೆಮ್ಮೆಯ ಪುತ್ರಿ ವಾಣಿ ಅವರು ತಮ್ಮ ಪ್ರತಿಭೆ, ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ರಾಷ್ಟ್ರೀಯ ಮಟ್ಟದಲ್ಲಿ ಈಜು ಕ್ರೀಡೆಯಲ್ಲಿ ಸಾಧನೆ ಮಾಡಿ, ಜಿಲ್ಲೆಯ ಕೀರ್ತಿಯನ್ನು ದೇಶದ ಮಟ್ಟದಲ್ಲಿ ಮೆರೆದಿದ್ದಾರೆ. ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಅವರ ಪಯಣ ಪ್ರತಿಯೊಬ್ಬ ಮಹಿಳೆಗೂ ಸ್ಪೂರ್ತಿದಾಯಕವಾಗಿದೆ.



ಬಾಲ್ಯದಿಂದಲೇ ಈಜು ಕ್ರೀಡೆಯ ಮೇಲೆ ಅಪಾರ ಆಸಕ್ತಿ ಹೊಂದಿದ್ದ ವಾಣಿ ಅವರು ಹುಟ್ಟೂರಾದ ಕಾಪುವಿನ ಉಳಿಯಾರಿನ ಪುಟ್ಟ ಕೆರೆಯಲ್ಲೇ ತಮ್ಮ ಈಜು ಪಯಣವನ್ನು ಆರಂಭಿಸಿದರು. ತಮ್ಮ ಅಕ್ಕತಂಗಿಯರೊಂದಿಗೆ ತಂದೆಯ ಮಾರ್ಗದರ್ಶನದಲ್ಲಿ ಅವರು ಈಜುವುದನ್ನು ಕಲಿತರು. ಸೌಕರ್ಯಗಳ ಕೊರತೆ ಇದ್ದರೂ ಆಸಕ್ತಿ ಮತ್ತು ಹಠದ ಬಲದಿಂದ ಮುಂದೆ ಸಾಗಿದ ಅವರು ಅನೇಕ ಸವಾಲುಗಳನ್ನು ಮೀರಿ ಇಂದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ತಮ್ಮ ಸಾಧನೆಯ ಹಿಂದಿನ ಪ್ರಮುಖ ಶಕ್ತಿಯಾಗಿ ವಾಣಿ ಅವರು ತಮ್ಮ ತಂದೆಯನ್ನು ನೆನಪಿಸುತ್ತಾರೆ. ನನ್ನ ಅಪ್ಪನೇ ನನ್ನ ಮೊದಲ ರೋಲ್ ಮಾಡಲ್. ನಾನು ಯಾವ ಸ್ಪರ್ಧೆಗೂ ಹೋದರೂ, ಶಾಲೆಯಲ್ಲಿ ಹಾಜರಾತಿ ಕಡಿಮೆಯಾದರೂ ಅಪ್ಪ ಎಲ್ಲವನ್ನೂ ನೋಡಿಕೊಂಡು ನನಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದರು. ಅವರ ಪ್ರೋತ್ಸಾಹವೇ ನನ್ನ ಧೈರ್ಯ, ಎಂದು ಅವರು ಹಂಚಿಕೊಳ್ಳುತ್ತಾರೆ. ತಂದೆಯ ಆ ನಂಬಿಕೆ ಮತ್ತು ಬೆಂಬಲವೇ ಅವರನ್ನು ಈ ಎತ್ತರಕ್ಕೆ ತಲುಪಿಸಿತು.ಅಷ್ಟಲ್ಲದೆ ಚಿನ್ನದ ಹುಡುಗಿ ಅಂತಲೂ ಕರೆಸಿಕೊಂಡಿದ್ದಾರೆ.
ಮದುವೆಯಾದ ನಂತರವೂ ಅವರ ಕನಸುಗಳ ಪಯಣ ನಿಂತಿಲ್ಲ. ಮದುವೆಯಾದ ಮೇಲೆ ಹುಡುಗಿಯ ಕನಸುಗಳು ಮುಗಿಯಬೇಕೆಂದಿಲ್ಲ,ಎಂಬ ಸಂದೇಶವನ್ನು ಅವರು ಸ್ಪಷ್ಟವಾಗಿ ನೀಡುತ್ತಾರೆ. ಅವರ ಗಂಡ ಮತ್ತು ಮನೆಮಂದಿಯವರೂ ಕೂಡಾ ಅವರ ಸಾಧನೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಕುಟುಂಬದ ಬೆಂಬಲ ಇದ್ದರೆ ಮಹಿಳೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ವಾಣಿ ಅವರ ಬದುಕೇ ಸಾಕ್ಷಿ.
ಜನರು ಏನು ಬೇಕಾದರೂ ಮಾತನಾಡುತ್ತಾರೆ. ಆದರೆ ನಾವು ನಮ್ಮ ಗುರಿಯ ಕಡೆ ಗಮನಹರಿಸಬೇಕು. ಸಣ್ಣ ಸಣ್ಣ ಸಮಸ್ಯೆಗಳಿಗೆ ಆತ್ಮಹತ್ಯೆ ಮಾಡುವ ಅವಶ್ಯಕತೆ ಇಲ್ಲ. ಜೀವನ ಅಮೂಲ್ಯ. ಒಂದು ಹಾದಿ ಮುಚ್ಚಿದರೆ ಇನ್ನೊಂದು ಹಾದಿ ತೆರೆದುಕೊಳ್ಳುತ್ತದೆ,. ಒಳ್ಳೆಯ ಗುರಿ ಇಟ್ಟು ಪರಿಶ್ರಮ ಪಟ್ಟರೆ, ಮುಂದೊಂದು ದಿನ ನಾವು ಕೂಡ ಯಾರಾದರೂ ರೋಲ್ ಮಾಡಲ್ ಆಗಬಹುದು ಎಂಬ ನಂಬಿಕೆಯನ್ನು ಅವರು ಯುವಜನರಲ್ಲಿ ಮೂಡಿಸುತ್ತಾರೆ.
ಕ್ರೀಡೆಯಲ್ಲಿ ಮಾತ್ರವಲ್ಲದೆ, ವಾಣಿ ಅವರು ಯಕ್ಷಗಾನದ ತೆಂಕುತಿಟ್ಟು ಮತ್ತು ಬಡಗು ತಿಟ್ಟಿನಲ್ಲೂ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಕ್ರೀಡೆ ಹಾಗೂ ಕಲೆಯೆರಡರಲ್ಲೂ ಸಮಾನ ಆಸಕ್ತಿ ತೋರಿರುವ ಅವರು ಬಹುಮುಖ ಪ್ರತಿಭೆಯ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.
22 ಜನರ ಮಧ್ಯೆ ರಾಷ್ಟ್ರೀಯ ಮಟ್ಟದಲ್ಲಿ ನನಗೆ ಪ್ರಶಸ್ತಿ ಸಿಕ್ಕದ್ದು ತುಂಬಾ ಸಂತೋಷ ತಂದ ಕ್ಷಣ, ಎಂದು ಅವರು ಹೆಮ್ಮೆಪಡುವರು. ಅವರ ಈ ಸಾಧನೆ ಕೇವಲ ವೈಯಕ್ತಿಕ ಜಯವಲ್ಲ, ಉಡುಪಿ ಜಿಲ್ಲೆಯ ಗೌರವವೂ ಹೌದು.
ವಾಣಿ ಅವರ ಜೀವನ ಪಯಣ ನಮಗೆ ಸ್ಪಷ್ಟವಾದ ಸಂದೇಶ ನೀಡುತ್ತದೆ ಕುಟುಂಬದ ಬೆಂಬಲ, ಆತ್ಮವಿಶ್ವಾಸ ಮತ್ತು ಹಠ ಇದ್ದರೆ ಯಾವುದೇ ಕನಸು ಅಸಾಧ್ಯವಲ್ಲ. ಮಹಿಳೆಯರು ತಮ್ಮ ಕನಸುಗಳನ್ನು ಬೆನ್ನಟ್ಟಲು ಧೈರ್ಯದಿಂದ ಮುಂದೆ ಬಂದರೆ, ಸಮಾಜವೂ ಅವರನ್ನು ಹೆಮ್ಮೆಪಡುವ ದಿನ ದೂರವಿಲ್ಲ.
ಲೇಖನ: ಉಷಾ ಭಟ್