ಕುಂದಾಪುರ, ಮಾ. 09 (DaijiworldNews/TA) : ವಾರಾಹಿ ನದಿಯನ್ನು ಅವಲಂಬಿಸಿರುವ ರೈತರ ಹಕ್ಕುಗಳಿಗೆ ಆದ್ಯತೆ ನೀಡಬೇಕು ಹಾಗೂ ಮೂಲ ಯೋಜನೆಯಂತೆ ನೀರಿನ ಹಂಚಿಕೆಯನ್ನು ಖಚಿತಪಡಿಸಬೇಕು ಎಂಬ ಆಗ್ರಹದೊಂದಿಗೆ ಕಂಡ್ಲೂರಿನಿಂದ ಸಿದ್ಧಾಪುರದವರೆಗೆ ಎರಡು ದಿನಗಳ ಕಾಲ ನಡೆದ ನೀರಿಗಾಗಿ ನಮ್ಮ ನಡಿಗೆ ಪಾದಯಾತ್ರೆ ಸಿದ್ಧಾಪುರದಲ್ಲಿ ಮುಕ್ತಾಯಗೊಂಡಿತು.


ಬೈಂದೂರು ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳೊಂದಿಗೆ ವಿವಿಧ ಸಂಘಟನೆಗಳ ಸಹಕಾರದಲ್ಲಿ ಪಾದಯಾತ್ರೆಯ ಸಮಾರೋಪ ಸಭೆಯಲ್ಲಿ ನೂರಾರು ಕೃಷಿಕರು ಭಾಗಿಯಾಗಿದ್ದರು. ಪಾದಯಾತ್ರೆಯಲ್ಲಿ ನಮ್ಮ ನದಿ–ನಮ್ಮ ನೀರು–ನಮ್ಮ ಹಕ್ಕು ಎಂಬ ಆಶಯದೊಂದಿಗೆ ರೈತರು ಸರ್ಕಾರದ ಮುಂದೆ ಈ ಬೇಡಿಕೆಗಳನ್ನು ಮಂಡಿಸಿದರು. ವಾರಾಹಿ ಬಲದಂಡೆ ನೀರಾವರಿ ಯೋಜನೆಯನ್ನು ಶೀಘ್ರ ಆರಂಭಿಸಿ ಪೂರ್ಣಗೊಳಿಸಬೇಕು. ಸಿದ್ಧಾಪುರ ಏತ ನೀರಾವರಿ ಯೋಜನೆಯ ಜಾಕ್ವೆಲ್ ಪಾಯಿಂಟ್ ಅನ್ನು ಡ್ಯಾಂ ಮೇಲ್ಭಾಗದಿಂದ ಕೆಳಭಾಗಕ್ಕೆ ಸ್ಥಳಾಂತರಿಸಬೇಕು. ಯೋಜನೆಯಿಂದ ವಂಚಿತವಾಗಿರುವ ಗ್ರಾಮಗಳು ಹಾಗೂ ಕೃಷಿಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕು ಸೇರಿದಂತೆ ಹಲವು ಬೇಡಿಕೆಗಳು ಕೇಳಿಬಂದವು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಮಾರೋಪ ಸಭೆ ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಹೋರಾಟಗಾರರಾದ ಸಂತೋಷ ಶೆಟ್ಟಿ ಬಲಾಡಿ ಮಾತನಾಡಿದರು.
ಪಾದಯಾತ್ರೆಯ ಮುದಾಳತ್ವ ವಹಿಸಿದ್ದ ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಸಿದ್ಧಾಪುರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಬಿಜೆಪಿ ಅಪ ಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿದರು. 2023ರಲ್ಲಿ ಮುಖ್ಯಮಂತ್ರಿಗೆ ನೀಡಿದ ಪತ್ರವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಹೇಳಿದರು. ವಾರಾಹಿ ಯೋಜನೆ ಪೂರ್ಣಗೊಳಿಸಲು ಬಿಜೆಪಿ ಏನು ಕೊಡುಗೆ ನೀಡಿದೆ ಎಂಬುದನ್ನು ಶಾಸಕ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುರ್ಮಾ ಶೆಟ್ಟಿ ಗುಡಿಬೆಟ್ಟು ಸೇರಿದಂತೆ ಹಲವರು ಮಾತನಾಡಿದರು. ಸಭೆಗೆ ಆಗಮಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಅವರ ಮನವಿಯನ್ನು ಸ್ವೀಕರಿಸಿದರು. ರೈತರ ಹಾಗೂ ಸ್ಥಳೀಯರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ, ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಸಿಪಿಐ ಸಂತೋಷ್ ಕಾಯ್ಕಿಣಿ, ಪಿಎಸ್ಐಗಳಾದ ಐ.ಆರ್. ಗಡ್ಡೇಕರ್, ಅಶೋಕ್ ಕುಮಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಒಟ್ಟಾರೆಯಾಗಿ ವಾರಾಹಿ ಯೋಜನೆಯ ಮುಂದಿನ ಹೋರಾಟ ನಿರಂತರವಾಗಿ ನಡೆಯುತ್ತಲೆ ಇದೆ, ಸರಕಾರ ಈ ನಿಟ್ಟಿನಲ್ಲಿ ತಜ್ಞರ ವರದಿ ಪಡೆದು ನೀರಾವರಿ ಯೋಜನೆಯನ್ನು ಮುಂದುವರಿಸಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆಯೋ ಕಾದು ನೋಡಬೇಕಿದೆ.