ಮಂಗಳೂರು, ಮಾ. 11 (DaijiworldNews/AA): ಮಾದಕ ದ್ರವ್ಯ ಗಾಂಜಾ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿ ಟಿ.ಪಿ. ಫಾರೂಕ್ ಮೇಲಿನ ಅಪರಾಧ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣದ ಕುರಿತು ವಾದ ಆಲಿಸಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಾರ್ಚ್ 16ನ್ನು ನಿಗದಿಪಡಿಸಿದೆ.

2020ರ ನವೆಂಬರ್ 10ರಂದು ಬಂದರು ನಿವಾಸಿ ಟಿ.ಪಿ. ಫಾರೂಕ್ (56) ಮತ್ತು ನೇಪಾಳದ ದಂಗ್ ವಲಯದ ರಾಜ್ಪುರ ನಿವಾಸಿ ಸಾಗರ್ ಸಿಂಗ್ (28) ಎಂಬುವವರು ಕಾರಿನಲ್ಲಿ ಮಂಗಳೂರಿನಿಂದ ಮೆಲ್ಕಾರ್ಗೆ ಗಾಂಜಾ ಮಾರಾಟ ಮಾಡಲು ಹೋಗುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ನಗರ ಪೊಲೀಸರು ಸಂಜೆ 6:20ರ ಸುಮಾರಿಗೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ತಪಾಸಣೆಯ ವೇಳೆ ಫಾರೂಕ್ ಅವರ ಕಾರಿನ ಡಿಕ್ಕಿಯಲ್ಲಿ 1.375 ಕೆಜಿ ಗಾಂಜಾ ಪತ್ತೆಯಾಗಿತ್ತು. ಅಲ್ಲದೆ, ಫಾರೂಕ್ ಅವರ ಪ್ಯಾಂಟ್ ಜೇಬಿನಲ್ಲಿ ತಲಾ 15 ಗ್ರಾಂನ 4 ಪ್ಯಾಕೆಟ್ಗಳಲ್ಲಿದ್ದ 60 ಗ್ರಾಂ ಗಾಂಜಾ ಮತ್ತು ಸಾಗರ್ ಸಿಂಗ್ ಜೇಬಿನಲ್ಲಿ 3 ಪ್ಯಾಕೆಟ್ಗಳಲ್ಲಿದ್ದ 45 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು.
ಪೊಲೀಸರು ಗಾಂಜಾ ಜೊತೆಗೆ ಕಾರು, ಮೊಬೈಲ್ ಫೋನ್ ಮತ್ತು ನಗದನ್ನು ವಶಪಡಿಸಿಕೊಂಡು ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ತನಿಖೆ ಪೂರ್ತಿಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಎರಡನೇ ಆರೋಪಿ ಸಾಗರ್ ಸಿಂಗ್ ಜಾಮೀನು ಪಡೆದ ಬಳಿಕ ತಲೆಮರೆಸಿಕೊಂಡಿದ್ದು, ಆತನ ವಿರುದ್ಧದ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ಒಟ್ಟು 10 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು, 29 ದಾಖಲೆಗಳನ್ನು ನ್ಯಾಯಾಲಯಕ್ಕೆ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ್ ಅವರು, ಮಾರ್ಚ್ 9ರಂದು ನೀಡಿದ ತೀರ್ಪಿನಲ್ಲಿ ಟಿ.ಪಿ. ಫಾರೂಕ್ ತಪ್ಪಿತಸ್ಥ ಎಂದು ಘೋಷಿಸಿದ್ದಾರೆ.
ಜಾಮೀನಿನ ಮೇಲೆ ಹೊರ ಬಂದಿದ್ದ ಫಾರೂಕ್ನನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿದೆ. ಎನ್ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಆತನಿಗೆ ಗರಿಷ್ಠ 10 ವರ್ಷಗಳವರೆಗೆ ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ. ಶಿಕ್ಷೆಯ ಪ್ರಮಾಣದ ಬಗ್ಗೆ ಮಾರ್ಚ್ 16ರಂದು ಅಂತಿಮ ತೀರ್ಪು ಹೊರಬೀಳಲಿದೆ.
ಫಾರೂಕ್ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲೂ ಮತ್ತೊಂದು ಗಾಂಜಾ ಪ್ರಕರಣ ದಾಖಲಾಗಿದ್ದು, ಅದರ ವಿಚಾರಣೆ ಪ್ರಗತಿಯಲ್ಲಿದೆ.