ಮಂಗಳೂರು, ಮಾ. 16 (DaijiworldNews/AA): ಮಂಗಳೂರು ನಗರದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಳೆದ ಕೆಲವು ದಿನಗಳಿಂದ ವಾಹನ ದಟ್ಟಣೆ ವಿಪರೀತವಾಗಿ ಹೆಚ್ಚಾಗಿದ್ದು, ಸುಗಮ ಸಂಚಾರವನ್ನು ನಿಯಂತ್ರಿಸಲು ಸಂಚಾರಿ ಪೊಲೀಸರು ತೀವ್ರ ಶ್ರಮವಹಿಸುತ್ತಿದ್ದಾರೆ.

ಈ ಹಿಂದೆ ಈ ಹೆದ್ದಾರಿಯ ಪ್ರಮುಖ ಜಂಕ್ಷನ್ಗಳಲ್ಲಿ ಅಪಘಾತಗಳು ವರದಿಯಾಗುತ್ತಿದ್ದವು. ಹಿಂದೆ ಇದ್ದ ಸಿಗ್ನಲ್ ದೀಪದ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು, ಆದರೆ ಈಗ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಪೊಲೀಸರು ಮತ್ತೆ ಸಿಗ್ನಲ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.
ಪ್ರಾಯೋಗಿಕವಾಗಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ 2 ನಿಮಿಷ ಮತ್ತು ಇತರ ದಿಕ್ಕುಗಳಿಂದ ಬರುವ ವಾಹನಗಳಿಗೆ 1 ನಿಮಿಷ ಕಾಲಾವಕಾಶ ನೀಡಲಾಗುತ್ತಿದೆ. ಅಗತ್ಯ ಬಿದ್ದರೆ ಈ ಸಮಯದಲ್ಲಿ ಬದಲಾವಣೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪಂಪ್ವೆಲ್ ವೃತ್ತದಿಂದ ಹಳೆ ಕಂಕನಾಡಿ ರಸ್ತೆ-ಕಂಕನಾಡಿ ವೃತ್ತದವರೆಗೆ ಮತ್ತು ಕರಾವಳಿ ವೃತ್ತದಿಂದ ಪಂಪ್ವೆಲ್ ವೃತ್ತದವರೆಗಿನ ಬೈಪಾಸ್ ರಸ್ತೆಯಲ್ಲಿ ಏಕಮುಖ ಸಂಚಾರ ಜಾರಿಯಲ್ಲಿರುವುದರಿಂದ, ವಾಹನಗಳು ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿಯನ್ನೇ ಅವಲಂಬಿಸಿವೆ. ಇದರಿಂದಾಗಿ ನಂತೂರು ಮತ್ತು ಕೆ.ಪಿ.ಟಿ ಮಾರ್ಗಗಳಲ್ಲಿ ಹಗಲು ಹೊತ್ತಿನಲ್ಲಿ ವಾಹನಗಳ ಸಾಲು ಕಂಡುಬರುತ್ತಿದೆ. ಸಂಜೆಯ ವೇಳೆ ಪಂಪ್ವೆಲ್ನಿಂದ ಕರಾವಳಿ ವೃತ್ತದ ಕಡೆಗೆ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು, ಪೊಲೀಸರು ಸಂಚಾರ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಸಿಗ್ನಲ್ ದೀಪಗಳಿಂದಾಗಿ ಸಂಚಾರ ವಿಳಂಬವಾಗುತ್ತಿದೆ ಮತ್ತು ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ಬಸ್ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಸಿಗ್ನಲ್ ವ್ಯವಸ್ಥೆಯಿಂದಾಗಿ ಕೆಲವು ವಾಹನ ಸವಾರರು ಗೊಂದಲಕ್ಕೀಡಾಗುತ್ತಿದ್ದು, ಅಪಘಾತಗಳ ಭೀತಿ ಎದುರಾಗಿದೆ. ಕಳೆದ ವಾರವಷ್ಟೇ ಜಂಕ್ಷನ್ನಲ್ಲಿ ಅಪಘಾತವೊಂದು ಸಂಭವಿಸಿತ್ತು.
ಅಪಘಾತ ವಲಯವೆಂದೇ ಗುರುತಿಸಲ್ಪಟ್ಟಿರುವ ನಂತೂರು ವೃತ್ತದಲ್ಲಿ ಶೀಘ್ರದಲ್ಲೇ ಸಿಗ್ನಲ್ ವ್ಯವಸ್ಥೆ ಆರಂಭವಾಗಲಿದೆ. ಪಡುವಾ ಕ್ರಾಸ್, ಕೊಟ್ಟಾರ, ಕೂಳೂರು, ಪಣಂಬೂರು ಮತ್ತು ಜೆಪ್ಪಿನಮೊಗರು ಸೇರಿದಂತೆ ಒಟ್ಟು 23 ಕಡೆಗಳಲ್ಲಿ ಈಗಾಗಲೇ ಬ್ಲಿಂಕಿಂಗ್ ಸಿಗ್ನಲ್ ಅಳವಡಿಸಲಾಗಿದೆ.
"ಹೆದ್ದಾರಿಯ ಉದ್ದಕ್ಕೂ ಸರ್ವಿಸ್ ರಸ್ತೆ ಅಭಿವೃದ್ಧಿ ಪಡಿಸುವ ಪ್ರಾಥಮಿಕ ಕಾಮಗಾರಿಗಳು ಆರಂಭವಾಗಿವೆ" ಎಂದು ಎನ್.ಎಚ್.ಎ.ಐ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ತಿಳಿಸಿದ್ದಾರೆ.
ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, "ಕೆ.ಪಿ.ಟಿ-ನಂತೂರು ಜಂಕ್ಷನ್ನಲ್ಲಿ ಸಂಚಾರ ಒತ್ತಡ ಹೆಚ್ಚಿದ್ದು, ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ" ಎಂದಿದ್ದಾರೆ.