ಉಡುಪಿ, ಮಾ. 16 (DaijiworldNews/AA): ಕಟಪಾಡಿ ಬಳಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗೆ ಸೇರಿದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ.



ಟ್ಯಾಂಕರ್ನಿಂದ ಅನಿಲ ಸೋರಿಕೆಯಾಗುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಇಂದು ರಾತ್ರಿ 8 ಗಂಟೆಯವರೆಗೆ ವಾಹನಗಳು ಬದಲಿ ಮಾರ್ಗದಲ್ಲಿ ಸಂಚಾರ ಮಾಡುವಂತೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಅವರು ಆದೇಶಿಸಿದ್ದಾರೆ.
ಪರ್ಯಾಯ ಸಂಚಾರ ಮಾರ್ಗಗಳು ಹೀಗಿವೆ:
ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಕಾಪುವಿನಿಂದ ಶಿರ್ವ - ಮೂಡುಬೆಳ್ಳೆ - ಮಣಿಪುರ - ಮಣಿಪಾಲ ಮಾರ್ಗವಾಗಿ ಉಡುಪಿ ತಲುಪಬಹುದು. ಅಥವಾ ಪಡುಬಿದ್ರೆ - ಬೆಳ್ಮಣ್ಣು - ಶಿರ್ವ - ಮಣಿಪಾಲ ಮಾರ್ಗವಾಗಿ ಉಡುಪಿ ಸೇರಬಹುದು.
ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಮಣಿಪಾಲದಿಂದ ಮಣಿಪುರ - ಮೂಡುಬೆಳ್ಳೆ - ಶಿರ್ವ - ಕಾಪು ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸಬಹುದು. ಅಥವಾ ಮಣಿಪಾಲ - ಶಿರ್ವ - ಬೆಳ್ಮಣ್ಣು - ಪಡುಬಿದ್ರೆ ಮಾರ್ಗವಾಗಿ ಮಂಗಳೂರು ತಲುಪಬಹುದು.
ಅಪಘಾತದ ಸ್ಥಳದಲ್ಲಿ ಅನಿಲ ಸೋರಿಕೆ ತಡೆಗಟ್ಟುವ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಆಡಳಿತ ಮಂಡಳಿ ವಿನಂತಿಸಿದೆ.