ಉಡುಪಿ, ಮಾ. 17 (DaijiworldNews/AA): ಕಟಪಾಡಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಎಲ್ಪಿಜಿ ಗ್ಯಾಸ್ ಟ್ಯಾಂಕರ್ ಒಂದು ಪಲ್ಟಿಯಾಗಿ ಅನಿಲ ಸೋರಿಕೆಯಾದ ಘಟನೆಗೆ ಸಂಬಂಧಿಸಿದಂತೆ ಸತತ 16 ಗಂಟೆಗಳ ಕಾರ್ಯಾಚರಣೆ ಬಳಿಕ ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.



ಮಾರ್ಚ್ 16 ರಂದು ಉಡುಪಿ ಕಡೆಗೆ ಚಲಿಸುತ್ತಿದ್ದ ಎಲ್ಪಿಜಿ ಹೊತ್ತ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಟ್ಯಾಂಕರ್ನಿಂದ ಅನಿಲ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿತ್ತು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಪೊಲೀಸರು ತಕ್ಷಣವೇ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ, ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಅಹಿತಕರ ಘಟನೆ ನಡೆಯದಂತೆ ಟ್ಯಾಂಕರ್ ಸುತ್ತಲಿನ ಪ್ರದೇಶವನ್ನು ಸೀಲ್ ಮಾಡಲಾಯಿತು.
ಸೋರಿಕೆಯಾಗುತ್ತಿದ್ದ ಅನಿಲವನ್ನು ಸುರಕ್ಷಿತವಾಗಿ ನಿರ್ವಹಿಸಲು ಬೃಹತ್ ಮಟ್ಟದ ರಕ್ಷಣಾ ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು. ಅನಿಲಕ್ಕೆ ಬೆಂಕಿ ತಗುಲದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಶ್ರಮಿಸಿದರು. ಹಾನಿಗೊಳಗಾದ ಟ್ಯಾಂಕರ್ನಿಂದ ಅನಿಲವನ್ನು ಮತ್ತೊಂದು ಟ್ಯಾಂಕರ್ಗೆ ವರ್ಗಾಯಿಸುವ ಪ್ರಕ್ರಿಯೆ ಸವಾಲಾಗಿದ್ದರಿಂದ ಈ ಕಾರ್ಯಾಚರಣೆ ಸುಮಾರು 16 ಗಂಟೆಗಳ ಕಾಲ ಮುಂದುವರಿಯಿತು.
ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಮಂಗಳೂರಿನಿಂದ ಭಾರತ್ ಗ್ಯಾಸ್ ಸಂಸ್ಥೆಯ ಎರಡು ಟ್ಯಾಂಕರ್ಗಳನ್ನು ಸ್ಥಳಕ್ಕೆ ತರಿಸಲಾಯಿತು. ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳ ಅಡಿಯಲ್ಲಿ ಮಗುಚಿ ಬಿದ್ದಿದ್ದ ವಾಹನದಿಂದ ಅನಿಲವನ್ನು ಹೊಸ ಟ್ಯಾಂಕರ್ಗಳಿಗೆ ಯಶಸ್ವಿಯಾಗಿ ವರ್ಗಾಯಿಸಲಾಯಿತು.
ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಡೆದ ಈ ಕಾರ್ಯಾಚರಣೆಯು ಮಧ್ಯರಾತ್ರಿ ಸುಮಾರು 1 ಗಂಟೆಗೆ ಪೂರ್ಣಗೊಂಡಿತು. ಅಪಾಯದ ಭೀತಿ ದೂರವಾದ ನಂತರ, ಅಪಘಾತಕ್ಕೀಡಾದ ಟ್ಯಾಂಕರ್ ಅನ್ನು ಸ್ಥಳಾಂತರಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಪುನರಾರಂಭಿಸಲಾಯಿತು. ಹೆದ್ದಾರಿ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಕೆಲಕಾಲ ತೊಂದರೆ ಅನುಭವಿಸಬೇಕಾಯಿತು.