ಉಡುಪಿ, ಮಾ. 18 (DaijiworldNews/T A): ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವದಿಂದಾಗಿ ಉಡುಪಿ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಹೊಟೇಲ್ಗಳು ಬಂದ್ ಆಗಿವೆ ಎಂದು ಜಿಲ್ಲಾ ಹೊಟೇಲ್ ಮಾಲಕರ ಸಂಘ ತಿಳಿಸಿದೆ.

ಕೆಲವು ದಿನಗಳಿಂದ ಹೊಟೇಲ್ಗಳಲ್ಲಿ ಕುಚ್ಚಲಕ್ಕಿ ಅನ್ನ, ದೋಸೆ ಸಹಿತ ಇತರ ತಿನಸುಗಳನ್ನು ಕೈಬಿಟ್ಟು ಹೊಟೇಲ್ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಈಗ 150ಕ್ಕೂ ಹೆಚ್ಚು ಹೊಟೇಲ್ಗಳಿಗೆ ಬೀಗ ಹಾಕಲಾಗಿದೆ. ಗ್ಯಾಸ್ ಪೂರೈಕೆ ಅಭಾವದಿಂದ ಅನಿವಾರ್ಯವಾಗಿ ಹೊಟೇಲ್ ಬಂದ್ ಮಾಡಲಾಗಿದೆ ಎಂಬ ಫಲಕವನ್ನೂ ಅಳವಡಿಸಲಾಗಿದೆ. ಬೇಡಿಕೆಗೆ ತಕ್ಕಂತೆ ಸಿಲಿಂಡರ್ ಪೂರೈಕೆಯಾದರಷ್ಟೇ ಹೊಟೇಲ್ ತೆರೆಯಬಹುದು ಎಂದು ಹೊಟೇಲ್ ಮಾಲಕರೊಬ್ಬರು ತಿಳಿಸಿದ್ದಾರೆ. ಕೆಲವು ಹೊಟೇಲ್ಗಳಲ್ಲಿ ಕಟ್ಟಿಗೆ ಬಳಸಿಕೊಂಡು ಅಡುಗೆ ಮಾಡಲಾಗುತ್ತದೆಯಾದರೂ ಈಗ ಕಾರ್ಮಿಕರ ಕೊರತೆಯಿಂದಾಗಿ ಅದಕ್ಕೂ ಸಮಸ್ಯೆ ಎದುರಾಗಿದೆ.
ಸೌದೆ ಬೇಕು ಎನ್ನುವಷ್ಟು ಲಭ್ಯತೆಯೂ ಇಲ್ಲ. ನಗರ ಪ್ರದೇಶದಲ್ಲಿ ಸೌದೆ ಮಾರಾಟ ಮಾಡುವವರ ಸಂಖ್ಯೆ ತೀರ ಕಡಿಮೆಯಿದೆ. ಸೌದೆ ದುಬಾರಿ ಜತೆಗೆ ಕೊರತೆಯೂ ಇದೆ ಎನ್ನಲಾಗಿದೆ. 2 ವಾರದ ಹಿಂದೆ ದಿನಕ್ಕೆ 2ರಿಂದ 3 ಸಾವಿರ ರೂ. ಮೌಲ್ಯದ ಕಟ್ಟಿಗೆಗಳು ಮಾರಾಟವಾಗುತ್ತಿದ್ದವು. ಮುಖ್ಯವಾಗಿ ಹಾಲ್ಗಳು, ಮನೆಮಂದಿಯಷ್ಟೇ ಕೊಂಡುಹೋಗುತ್ತಿದ್ದರು. ಆದರೆ ಈಗ ಹೊಟೇಲ್ ಮಾಲಕರಿಂದಲೇ ಅಪಾರ ಪ್ರಮಾಣದ ಬೇಡಿಕೆ ವ್ಯಕ್ತವಾಗುತ್ತಿದೆ. ದಿನಕ್ಕೆ 10 ಸಾವಿರ ರೂ.ಗೂ ಅಧಿಕ ಮೌಲ್ಯದ ಕಟ್ಟಿಗೆಗಳು ಮಾರಾಟವಾಗುತ್ತಿವೆ. ಅದರಲ್ಲೂ ಈಗಾಗಲೇ ಮುಂಗಡವಾಗಿ ಟನ್ಗಟ್ಟಲೆ ಕಟ್ಟಿಗೆ ಬುಕಿಂಗ್ ಮಾಡಿದವರು ಇದ್ದಾರೆ ಎಂದು ಮೂಲಗಳು ತಿಳಿಸಿವೆ.