ಬಂಟ್ವಾಳ, ಮಾ. 22 (DaijiworldNews/TA): ಬಂಟ್ವಾಳದ ಅವಿವಾಹಿತ ಯುವಕನೋರ್ವ ಸುಳ್ಯದ ಹೋಮ್ ಸ್ಟೇಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೊಂಡಾಲ ಶಾಂತಿಗುಡ್ಡೆ ನಿವಾಸಿ ತಿಲಕ್ ರಾಜ್ ಎಂಬಾತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.


ಸುಳ್ಯದ ಅರಂತೋಡು ಹೋಮ್ ಸ್ಟೇ ಯ ಕೋಣೆಯಲ್ಲಿ ಶರ್ಟ್ ಹಾಗೂ ಪ್ಯಾಂಟ್ ನ್ನು ಬಳಸಿಕೊಂಡು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಇಂಟಿರಿಯರ್ ಕೆಲಸಗಾರನಾಗಿರುವ ತಿಲಕ್ ರಾಜ್ ಅವರು ಅತ್ಯಂತ ಮೃದುಸ್ವಭಾವದ ವ್ಯಕ್ತಿಯಾಗಿದ್ದು, ಎಲ್ಲರ ಅಚ್ಚುಮೆಚ್ಚಿನವರಾಗಿದ್ದರು. ಮಾ.20 ರಂದು ಸಂಜೆ ಸುಳ್ಯದಲ್ಲಿ ಕೆಲಸ ಇದೆ ಎಂದು ಹೇಳಿ ಹೋಗಿರುವ ಈತ ಸುಳ್ಯದ ಆರಂತೋಡು ಪಯಸ್ವಿನಿ ಹೋಮ್ ಸ್ಟೇ ನಲ್ಲಿ ಬಾಡಿಗೆಗೆ ರೂಮ್ ಪಡೆದಿದ್ದಾನೆ. ಬಳಿಕ ಅದೇ ಹೋಮ್ ಸ್ಟೇ ನ ಹೋಟೆಲ್ ನಲ್ಲಿ ಚಹಾ ಕುಡಿದು ಬಳಿಕ ರೂಮ್ ಗೆ ತೆರಳಿ ಮಧ್ಯರಾತ್ರಿ ವರೆಗೆ ಆತನ ಆತ್ಮೀಯ ಸ್ನೇಹಿತನ ಮೊಬೈಲ್ ಗೆ ವಾಯ್ಸ್ ಮೇಸೇಜ್ ಕಳುಹಿಸಿ, ಹಣಕಾಸು ವಿಚಾರ ಸಹಿತ ಅನೇಕ ವಿಚಾರಗಳನ್ನು ಕಳುಹಿಸಿದ್ಧಾನೆ.
ಮತ್ತು ತಾನು ದೂರ ಹೋಗುವುದಾಗಿ ತಿಳಿಸಿದ್ದು ನನ್ನನ್ನು ಕರೆಯಬೇಡಿ ಎಂದಿದ್ದ. ಜೊತೆಗೆ ಅಲ್ಲಿಯ ಲೊಕೇಸನ್ ಕೂಡ ಸಂದೇಶದ ಜೊತೆ ಕಳುಹಿಸಿದ್ದ ಎನ್ನಲಾಗಿದೆ. ಆದರೆ ಸ್ನೇಹಿತ ಮಾತ್ರ ಎಲ್ಲಾ ಸಂದೇಶವನ್ನು ನೋಡಿದ್ದು ಬೆಳಿಗ್ಗೆ . ಅಷ್ಟು ಹೊತ್ತಿಗೆ ಎಲ್ಲವೂ ಮುಗಿದು ಹೋಗಿತ್ತು. ಆದರೆ ಸಾವಿನ ಕಾರಣ ಮಾತ್ರ ತಿಳಿಸದೇ ನಿಗೂಢವಾಗಿರುವುದು ಮನೆಮಂದಿಗೆ ಹಾಗೂ ಸ್ನೇಹಿತರಿಗೆ ತಲೆನೋವು ತಂದಿದೆ. ಸ್ಥಳಕ್ಕೆ ಸುಳ್ಯ ಎಸ್.ಐ.ಸಂತೋಷ್ ಹಾಗೂ ಸಿಬ್ಬಂದಿಗಳು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.