ಉಡುಪಿ, ಜೂ. 08 (DaijiworldNews/AA): ಕರ್ನಾಟಕದ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ಕೇಂದ್ರವಾದ ಉಡುಪಿಗೆ ಪ್ರತಿದಿನ ಸಾವಿರಾರು ಭಕ್ತರು ಮತ್ತು ಪ್ರವಾಸಿಗರು ಆಗಮಿಸುತ್ತಾರೆ. ಶ್ರೀಕೃಷ್ಣ ಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಕಾರ್ಕಳ, ಮಲ್ಪೆ ಬೀಚ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ತೆರಳುವವರು ಉಡುಪಿ ಸರ್ವಿಸ್ ಬಸ್ ನಿಲ್ದಾಣವನ್ನು ಪ್ರಮುಖ ಸಾರಿಗೆ ಕೇಂದ್ರವಾಗಿ ಬಳಸುತ್ತಾರೆ. ಆದರೆ, ಇಲ್ಲಿನ ಬಸ್ ತಂಗುದಾಣದ ಹದಗೆಟ್ಟ ಸ್ಥಿತಿಯಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.














ನೈಋತ್ಯ ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಮಂಗಳೂರು ಕಡೆಗೆ ಹೋಗುವ ಎಕ್ಸ್ಪ್ರೆಸ್ ಬಸ್ಗಳ ತಂಗುದಾಣದ ಮೇಲ್ಛಾವಣಿ ಹಲವು ಕಡೆಗಳಲ್ಲಿ ಸೋರುತ್ತಿದ್ದು, ಮಳೆಯಿಂದ ರಕ್ಷಿಸಿಕೊಳ್ಳಲು ಪ್ರಯಾಣಿಕರು ಕೊಡೆ ಹಿಡಿದುಕೊಂಡೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉಡುಪಿ ನಗರಸಭೆಯ ವ್ಯಾಪ್ತಿಗೆ ಬರುವ ಈ ಬಸ್ ತಂಗುದಾಣ ದೀರ್ಘಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಮೇಲ್ಛಾವಣಿ ಸೋರುವಿಕೆಯಲ್ಲದೆ, ಬಸ್ ನಿಲ್ದಾಣದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆಯಿಲ್ಲದಿರುವುದು ಮತ್ತು ನೆಲ ಅಸಮತಟ್ಟಾಗಿರುವುದು ಪ್ರಯಾಣಿಕರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.
ನಿರ್ವಹಣೆಯ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಸ್ ಏಜೆಂಟ್ ಒಬ್ಬರು, "ಬಸ್ ನಿಲ್ದಾಣದ ಮೇಲ್ಛಾವಣಿ ಸೋರುತ್ತಿದ್ದರೂ ನಗರಸಭೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಅನಿವಾರ್ಯವಾಗಿ ಕೊಡೆ ಹಿಡಿದು ಬಿಲ್ಲಬೇಕಾಗಿದೆ. ಇಲ್ಲಿ ಸರಿಯಾದ ದೀಪದ ವ್ಯವಸ್ಥೆಯಿಲ್ಲ, ನೆಲವೂ ಸಮತಟ್ಟಾಗಿಲ್ಲ. ಉಡುಪಿಗೆ ಬರುವ ಪ್ರವಾಸಿಗರಿಗೆ ಇದು ನಗರದ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಮೂಡಿಸುತ್ತದೆ" ಎಂದರು.
ಮತ್ತೊಬ್ಬ ಬಸ್ ಏಜೆಂಟ್ ಮಾತನಾಡಿ, "ಮೇಲ್ಛಾವಣಿ ಸೋರುತ್ತಿರುವ ಕಾರಣ ಪ್ರಯಾಣಿಕರು ಬಸ್ಸಿಗಾಗಿ ಕಾಯುವಾಗ ಮಳೆಗೆ ನೆನೆಯುತ್ತಿದ್ದಾರೆ. ಪದೇ ಪದೇ ದೂರು ನೀಡಿದರೂ ನಗರಸಭೆ ಅಧಿಕಾರಿಗಳು ಈ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ" ಎಂದು ಆರೋಪಿಸಿದರು.
"ತಂಗುದಾಣದ ಒಳಗೆ ನಿಂತಿದ್ದರೂ ನಾವು ಕೊಡೆ ಹಿಡಿಯಬೇಕಾದ ಸ್ಥಿತಿ ಇದೆ. ಅಧಿಕಾರಿಗಳು ತೆರಿಗೆ ವಸೂಲಿ ಮಾಡುತ್ತಾರೆ, ಅಭಿವೃದ್ಧಿಯ ಭರವಸೆ ನೀಡುತ್ತಾರೆ, ಆದರೆ ಮೂಲಭೂತ ಸೌಕರ್ಯಗಳೇ ಇಲ್ಲ. ಮಳೆಗಾಲ ಈಗಾಗಲೇ ಆರಂಭವಾಗಿದೆ, ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು" ಎಂದು ಪ್ರಯಾಣಿಕರೊಬ್ಬರು ಒತ್ತಾಯಿಸಿದರು.
ಮುಂಗಾರು ಮಳೆ ತೀವ್ರಗೊಳ್ಳುವ ಮೊದಲೇ ಉಡುಪಿ ನಗರಸಭೆಯು ಹಾನಿಗೊಳಗಾದ ಮೇಲ್ಛಾವಣಿಯನ್ನು ದುರಸ್ತಿಪಡಿಸಬೇಕು ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಸುಧಾರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರಮುಖ ಯಾತ್ರಾಸ್ಥಳ ಮತ್ತು ಪ್ರವಾಸಿ ತಾಣವಾಗಿರುವ ಉಡುಪಿಯ ಘನತೆಯನ್ನು ಉಳಿಸಿಕೊಳ್ಳಲು ಮತ್ತು ಸ್ಥಳೀಯ ನಿವಾಸಿಗಳ ಅನುಕೂಲಕ್ಕಾಗಿ ಸ್ವಚ್ಛ ಹಾಗೂ ಸುಸಜ್ಜಿತ ಬಸ್ ನಿಲ್ದಾಣ ಅತ್ಯಗತ್ಯ ಎಂದು ನಾಗರಿಕರು ಆಗ್ರಹಿಸಿದ್ದಾರೆ.