ಬೆಳ್ತಂಗಡಿ, ಜೂ. 10 (DaijiworldNews/AA): ಬೆಳ್ತಂಗಡಿ ತಾಲೂಕಿನಾದ್ಯಂತ ಮಂಗಳವಾರ ಮಧ್ಯಾಹ್ನ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರ ಮೂಲಸೌಕರ್ಯಗಳಿಗೆ ಹಾನಿಯಾಗಿದೆ.



ಉಜಿರೆ ಮತ್ತು ಕನ್ಯಾಡಿ-1 ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಡೆಬೆಟ್ಟು ಎಂಬಲ್ಲಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಮಳೆಗೆ ಕೊಚ್ಚಿಹೋಗಿದೆ. ಪರಿಣಾಮ ಉಜಿರೆ ಮತ್ತು ಸುತ್ತಮುತ್ತಲ ಪ್ರದೇಶಗಳ ನಡುವಿನ ಸಂಪರ್ಕ ಕಡಿತಗೊಂಡಿದೆ.
ಅಂಬಡೆಬೆಟ್ಟಿನಲ್ಲಿ ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ಹೊಸ ಸಣ್ಣ ಸೇತುವೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಸೇತುವೆ ನಿರ್ಮಾಣವಾದರೆ ಉಜಿರೆ ಮತ್ತು ನಿಡಿಗಲ್ನಿಂದ ನಾಡ, ಇಂದಬೆಟ್ಟು, ಕೊಲ್ಲಿ, ಗುರಿಪಳ್ಳ ಮತ್ತು ಕಯ್ಯಂಗು ಭಾಗದ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಲಿದೆ.
ಸೇತುವೆ ನಿರ್ಮಾಣದ ಹಿನ್ನೆಲೆ ಹಳೆಯ ಸೇತುವೆಯನ್ನು ತೆರವುಗೊಳಿಸಿ, ಪಕ್ಕದಲ್ಲಿ ಮಣ್ಣು ತುಂಬಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದರೆ, ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಹಳ್ಳ ತುಂಬಿ ಹರಿದ ಪರಿಣಾಮ, ತಾತ್ಕಾಲಿಕ ರಸ್ತೆಯ ಮೇಲೆ ಸುಮಾರು ಮೂರು ಅಡಿಗಳಷ್ಟು ನೀರು ಹರಿದು ಮಣ್ಣಿನ ಏರಿ ಕೊಚ್ಚಿಹೋಗಿದೆ.
ಸ್ಥಳೀಯರು ಮತ್ತು ಪೊಲೀಸರು ರಸ್ತೆಯ ಎರಡೂ ಕಡೆಯಿಂದ ವಾಹನ ಸಂಚಾರವನ್ನು ತಡೆಗಟ್ಟಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಮಳೆ ಮುಂದುವರಿದರೆ ತಾತ್ಕಾಲಿಕ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗುವ ಆತಂಕ ಎದುರಾಗಿದೆ.
ಅಂಬಡೆಬೆಟ್ಟು ಮಾರ್ಗ ಬಂದ್ ಆಗಿರುವುದರಿಂದ, ಸ್ಥಳೀಯ ನಿವಾಸಿಗಳು ಮತ್ತು ಶಾಲಾ ಮಕ್ಕಳು ಉಜಿರೆ ಮತ್ತಿತರ ಕಡೆಗಳಿಗೆ ತೆರಳಲು ಹೆಚ್ಚುವರಿಯಾಗಿ 20 ಕಿಲೋಮೀಟರ್ ಸುತ್ತಿ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ.
ಮಳೆಗಾಲ ಆರಂಭವಾಗುವ ಮೊದಲೇ ಹೊಸ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಾವು ಈ ಹಿಂದೆಯೇ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಮನವಿ ಮಾಡಿದ್ದೆವು. ಆದರೆ, ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ. ಮಳೆ ಇದೇ ರೀತಿ ಮುಂದುವರಿದರೆ, ಸೇತುವೆಯಿಲ್ಲದೆ ಇಡೀ ಮಳೆಗಾಲದಲ್ಲಿ ಸ್ಥಳೀಯರು ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂಡಾಜೆ ಗ್ರಾಮದ ಸೋಮಂತಡ್ಕ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನೀರು ತುಂಬಿಕೊಂಡಿದೆ. ಒಳಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ಮಳೆನೀರು ರಸ್ತೆಗೆ ಹರಿದು ಬಂದು ಅಂಗಡಿಗಳ ಮುಂಭಾಗಕ್ಕೆ ನುಗ್ಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ತಾಲೂಕಿನಾದ್ಯಂತ ನೂರಾರು ಅಡಿಕೆ ಮತ್ತು ರಬ್ಬರ್ ಮರಗಳು ಧರೆಗುರುಳಿವೆ.
ಹಲವು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ, ಖಾಸಗಿ ಟೆಲಿಕಾಂ ಕಂಪನಿಗಳ ಮೊಬೈಲ್ ಟವರ್ಗಳು ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿದ್ದರಿಂದ ಗ್ರಾಹಕರಿಗೆ ತೀವ್ರ ತೊಂದರೆಯಾಗಿದೆ.