ಉಡುಪಿ, ಜೂ. 17 (DaijiworldNews/AK): ಡೆಬಿಟ್ ಕಾರ್ಡ್ ಮೂಲಕ ವಂಚನೆ ನಡೆಸಿರುವ ಖದೀಮರು ವ್ಯಕ್ತಿಯೋರ್ವರ ಖಾತೆಯಿಂದ ಬರೋಬ್ಬರಿ 2 ಲಕ್ಷ ರೂಪಾಯಿ ಹಣ ದೋಚಿರುವ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

ದೂರುದಾರರು ಜೂನ್ 3ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ತಮ್ಮ ಡೆಬಿಟ್ ಕಾರ್ಡ್ ಬಳಸಿ ಆಸ್ಪತ್ರೆ ಬಿಲ್ ಪಾವತಿಸಿದ್ದರು. ಬಳಿಕ ಅವರು ಯಾವುದೇ ಹಣಕಾಸು ವ್ಯವಹಾರ ನಡೆಸಿರಲಿಲ್ಲ. ಹೀಗಿದ್ದರೂ ಜೂನ್ 8ರಂದು ಅವರ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗಿರುವ ಕುರಿತು ಎಸ್ಎಂಎಸ್ ಸಂದೇಶ ಬಂದಿದ್ದು, ಇದರಿಂದ ಅನುಮಾನಗೊಂಡ ಅವರು ಬ್ಯಾಂಕ್ಗೆ ತೆರಳಿ ವ್ಯವಹಾರಗಳ ವಿವರ ಪರಿಶೀಲಿಸಿದಾಗ ವಂಚನೆ ನಡೆದಿರೋದು ಬೆಳಕಿಗೆ ಬಂದಿದೆ.
ಪರಿಶೀಲನೆ ವೇಳೆ ಜೂನ್ 5ರಿಂದ 8ರ ನಡುವಿನ ಅವಧಿಯಲ್ಲಿ, ಅವರ ಅರಿವಿಲ್ಲದೆ 2.12 ಲಕ್ಷವನ್ನು ಅಪರಿಚಿತ ಖಾತೆಗೆ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(D) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.