ಕುಂದಾಪುರ, ಜು 03 (DaijiworldNews/MS): ಕಳೆದ ಮೂರು ದಿನಗಳಿಂದ ಸುರಿಯಿತ್ತಿರುವ ಭಾರೀ ಮಳೆಯ ಜೊತೆಗೆ ಬುಧವಾರ ಬೀಸಿದ ಸುಂಟರಗಾಳಿಗೆ ಕುಂದಾಪುರ ತಾಲೂಕಿನ ಅಮಾಸಬೈಲು ಗ್ರಾಮದ ರಟ್ಟಾಡಿ, ಕೊಳಂಜೆ ಮೊದಲಾದೆಡೆಗಳಲ್ಲಿ ಕೃಷಿ ಹಾನಿ ಹಾಗೂ ಅರಣ್ಯ ಹಾನಿ ಸಂಭವಿಸಿ ಲಕ್ಷಾಂತರ ಮೌಲ್ಯದ ಮರಗಿಡಗಳು, ಮನೆ ಹಾನಿಗೊಂಡಿವೆ.




ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಗ್ರಾಮಿಣ ಭಾಗವಾದ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರಟ್ಟಾಡಿ ಹಾಗೂ ಕೊಳಂಜೆ ಎಂಬಲ್ಲಿ ಕೃಷಿ ತೋಟಕ್ಕೆ ಅಪಾರ ಹಾನಿ ಸಂಭವಿಸಿದೆ. ಕೊಳಂಜೆಯಲ್ಲಿ ಸುಮಾರು ಮೂರೂವರೆ ಎಕರೆ ಕೃಷಿ ಭೂಮಿ ಸುಂಟರಗಾಳಿಯ ತೀವ್ರತೆಗೆ ಧ್ವಂಸವಾಗಿದೆ. ಹಲವಾರು ಮನೆಗಳಿಗೂ ಹಾನಿಯಾಗಿವೆ.
ರಟ್ಟಾಡಿಯಲ್ಲಿ ಮರಗಳೂ ಸೇರಿದಂತೆ ತೋಟಗಳಿಗೆ ನುಗ್ಗಿದ ಸುಂಟರಗಾಳಿಯಿಂದಾಗಿ ಕೃಷಿ ನಾಶವಾಗಿದೆ. ಅಲ್ಲದೇ ಮನಗಳ ಮೇಲ್ಛಾವಣಿಗಳೂ ಧರೆಗುರುಳಿವೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶೋಭಲಕ್ಷ್ಮೀ, ಅರಣ್ಯಾಧಿಕಾರಿಗಳು, ಕೃಷಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದು, ಸಂಭವಿಸಿದ ನಷ್ಟಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.