ಬಂಟ್ವಾಳ, ಜು 15(DaijiworldNews/ AK):ತಾಲೂಕಿನಾದ್ಯಂತ ಮಂಗಳವಾರ ಮಳೆಯ ಆರ್ಭಟ ಜೋರಾಗಿದ್ದು, ಹಲವೆಡೆಗಳಲ್ಲಿ ಹಾನಿ ಸಂಭವಿಸಿದೆ. ಪುದು ಗ್ರಾಮದ ಸುಜೀರು ಎಂಬಲ್ಲಿ ಸುಶೀಲ ಎಂಬವರ ಮನೆ ಹತ್ತಿರದ ಬಂಡೆ ಕಲ್ಲು ಕುಸಿದು ಬಿದ್ದಿದ್ದು ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.



ವೀರಕಂಭ ಗ್ರಾಮದ ಮಜಿ ಎಂಬಲ್ಲಿ ಯೋಗಿನಿ ಎಂಬವರ ಮನೆಗೆ ಭಾಗಶ: ಹಾನಿಯಾಗಿರುತ್ತದೆ. ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿ ಪ್ರಮೀಳಾ ಕೋಂದಿ ಸುರೇಂದ್ರಶೆಟ್ಟಿಯವರ ಪಕ್ಕಾಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕರಿಯಂಗಳ ಗ್ರಾಮದ ಪೊಳಲಿ ಜನಾರ್ಧನ ದೇವಾಡಿಗ ರವರ ಮನೆಯ ಸೀಟು ಗಾಳಿಗೆ ಹಾರಿ ಹೋಗಿದ್ದು ಮನೆಯ ಸಾಮಾಗ್ರಿಗಳು ಹಾನಿಗೊಂಡಿರುತ್ತದೆ ಎಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ.
ಮೈದುಂಬಿ ಹರಿಯುವ ನೇತ್ರಾವತಿ:
ಬಂಟ್ವಾಳ ನೇತ್ರಾವತಿ ನದಿ ನೀರಿನ ಮಟ್ಟ ಬೆಳಿಗ್ಗೆ 6.6 ಮೀಟರ್ ಗೆ ಏರಿಕಯಾಗಿದ್ದು, ಸಂಜೆ ವೇಳೆ 6.4 ಮೀಟರ್ ಗೆ ಇಳಿಕೆಯಾಗಿದೆ. ನದಿಪಾತ್ರದ ಮುಳುಗಡೆ ಪ್ರದೇಶಗಳ ನಿವಾಸಿಗಳಿಗೆ ಈ ಕುರಿತು ಮುನ್ಸೂಚನೆ ನೀಡಲಾಗಿದ್ದು, ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.