ಬೆಂಗಳೂರು, ಜ.19 (DaijiworldNews/AA): ಯತ್ನಾಳ್ 60 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ಬಾಲಿಷ ಹೇಳಿಕೆ ಹೇಳಿದ್ದಾರೆ. ನಮ್ಮಿಂದ 60 ಶಾಸಕರು ಹೋಗಲ್ಲ, ಬಿಜೆಪಿ- ಜೆಡಿಎಸ್ನಿಂದ 25 ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರರ ಕುರ್ಚಿ ಅಲುಗಾಡುತ್ತಿದೆ. ಅವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಅವರುಗಳೇ ಏಕವಚನದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಅನ್ಯ ಪಕ್ಷಗಳ ಶಾಸಕರಿಗೆ ಯಾವುದೇ ಕಂಡೀಷನ್ ಇಲ್ಲ. ಬನ್ನಿ ಎಂದು ಆಹ್ವಾನ ನೀಡುತ್ತೇವೆ. ಕೆಲವು ಕಡೆ ನಮ್ಮಲ್ಲಿ ಸೂಕ್ತ ಅಭ್ಯರ್ಥಿ ಇರಲ್ಲ. ಅಂತಹ ಕಡೆ ವಾತಾವರಣ ನೋಡಿಕೊಂಡು ಹೇಳುತ್ತೇವೆ. ಅಧ್ಯಕ್ಷರು ಸೂಕ್ತ ಸಂದರ್ಭದಲ್ಲಿ ಹೇಳುತ್ತಾರೆ. ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ಬಿಜೆಪಿಯಲ್ಲೇ ಒಳ ರಾಜಕೀಯ ಹೆಚ್ಚಾಗಿದೆ. ಏಕವಚನದಲ್ಲೇ ಬೈದುಕೊಳ್ಳುತ್ತಿದ್ದಾರೆ. ಅವರಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ. ನಮ್ಮ ಸರ್ಕಾರ 5 ವರ್ಷ ಅಧಿಕಾರ ಪೂರೈಕೆ ಮಾಡುತ್ತದೆ. ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಿಎಂ ಡಿಸಿಎಂ ಸ್ಥಾನ ಭದ್ರವಾಗಿದೆ ಎಂದರು.