ಬೆಂಗಳೂರು,ಜ.21 (DaijiworldNews/AK): ಕಾಂಗ್ರೆಸ್ಸಿಗರು ಇಂದಿನ ಸಮಾವೇಶಕ್ಕೆ ಬಳಸಿದ ಹಣ ಯಾವುದು? ಅದರ ಲೆಕ್ಕ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅದು ಕಾಂಗ್ರೆಸ್ಸಿನ ಖಾತೆಯಿಂದ ಖರ್ಚಾದ ಹಣವೇ? ಅಥವಾ ನೀವು ಸರಕಾರದ ಬೊಕ್ಕಸದಿಂದ ಖರ್ಚು ಮಾಡಿದ್ದೀರಾ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು. ಸುವರ್ಣಸೌಧದ ಮುಂದೆ ಗಾಂಧಿ ಪ್ರತಿಮೆಯನ್ನು ಇವತ್ತು ಪ್ರತಿಷ್ಠಾಪನೆ ಮಾಡಿದ್ದಾರೆ. ಸರಕಾರಿ ಬೊಕ್ಕಸದಿಂದ ಗಾಂಧಿ ಪ್ರತಿಮೆ ಪ್ರತಿಷ್ಠಾಪನೆಗೆ ನಮ್ಮ ವಿರೋಧವಿಲ್ಲ ಎಂದು ತಿಳಿಸಿದರು.
ಇದು ಮಹಾತ್ಮ ಗಾಂಧಿಯವರ ಕಾಲದ ಕಾಂಗ್ರೆಸ್ ಪಕ್ಷ ಅಲ್ಲ; ಮಹಾತ್ಮ ಗಾಂಧಿ ಸಿದ್ಧಾಂತಕ್ಕೂ ಇವತ್ತಿನ ಗಾಂಧಿಗಳ ಕಾಂಗ್ರೆಸ್ಸಿನ ಸಿದ್ಧಾಂತಕ್ಕೂ ಅಜಗಜಾಂತರವಿದೆ. ಅವತ್ತಿನ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಯಾರು ಮದ್ಯಪಾನ ಮಾಡುತ್ತಿದ್ದರೋ ಅವರು ಸದಸ್ಯರಾಗುವ ಹಾಗಿರಲಿಲ್ಲ; ಇವತ್ತಿನ ಕಾಂಗ್ರೆಸ್ಸಿನವರು ರಾತ್ರಿಯಿಡೀ ಕುಡಿದು ಮಲಗಿದ್ದು, ಬೆಳಿಗ್ಗೆ ಸಮಾವೇಶ ಮಾಡುತ್ತಾರೆ ಎಂದು ಟೀಕಿಸಿದರು.
ಎಲ್ಲರೂ ಖಾದಿಧಾರಿಗಳಾಗಿ ಇರಬೇಕು ಎಂಬುದು ಹಳೆ ಕಾಂಗ್ರೆಸ್ಸಿನ ಸಿದ್ಧಾಂತ. ಇವತ್ತು ಶೇ 5- 10 ರಷ್ಟು ಖಾದಿಧಾರಿಗಳೂ ಅಲ್ಲಿ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಮಹಾತ್ಮ ಗಾಂಧಿಯವರು ಈ ಕಾಲದಲ್ಲಿ ಇದ್ದಿದ್ದರೆ, ಈ ಕಾಂಗ್ರೆಸ್ಸಿನವರನ್ನು ಅಟ್ಟಾಡಿಸಿ, ಕಾಂಗ್ರೆಸ್ಸಿನಿಂದ ಹೊರಕ್ಕೆ ಓಡಿಸುತ್ತಿದ್ದರು ಎಂದು ತಿಳಿಸಿದರು.
ಕಾಂಗ್ರೆಸ್ ಸುಡುವ ಮನೆ ಎಂದಿದ್ದ ಡಾ.ಅಂಬೇಡ್ಕರರು
ಇಂಥ ಪರಿಸ್ಥಿತಿಯಲ್ಲಿ ಇಲ್ಲಿ ಕಾಂಗ್ರೆಸ್ಸಿನ ಒಂದು ಸಮಾವೇಶ ನಡೆಯುತ್ತಿದೆ. ಇದು ಗಾಂಧಿ ತತ್ವಗಳ ವಿರೋಧಿ ಕಾಂಗ್ರೆಸ್ಸಿನ ಸಮಾವೇಶ ಎಂದ ಅವರು, ಜೈ ಭೀಮ್ ಎಂದಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರರು ಯಾವತ್ತಾದರೂ ಕಾಂಗ್ರೆಸ್ಸಿನವರಾಗಿದ್ದರೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸುಡುವ ಮನೆ ಎಂದವರು, ಕಾಂಗ್ರೆಸ್ಸಿನ ಮೊದಲ ಕ್ಯಾಬಿನೆಟ್ನಿಂದ ರಾಜೀನಾಮೆ ಕೊಟ್ಟು ಹೊರಕ್ಕೆ ಹೋದವರು ಬಾಬಾ ಸಾಹೇಬ ಅಂಬೇಡ್ಕರರು ಎಂದು ಗಮನ ಸೆಳೆದರು.