ಬೆಂಗಳೂರು,ಫೆ.27(DaijiworldNews/AK): ಈ ವರ್ಷ ಮಂಡಿಸುವ ಬಜೆಟ್ನಲ್ಲಿ ದಲಿತರಿಗೆ ಮೀಸಲಾಗಿಡುವ ಎಸ್.ಸಿ.ಪಿ., ಟಿ.ಎಸ್.ಪಿ.ಗೆ ಸೇರಿದ ಒಂದು ರೂಪಾಯಿ ಹಣವನ್ನು ಕೂಡ ಗ್ಯಾರಂಟಿಗಳಿಗೆ ಬಳಸಬಾರದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ" ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಮೀಸಲಿಟ್ಟ ಎಸ್.ಸಿ.ಪಿ., ಟಿ.ಎಸ್.ಪಿ. ಹಣದಲ್ಲಿ ಮೊದಲು ಅಂಬೇಡ್ಕರ್ ನಿಗಮ, ಆದಿ ಜಾಂಬವ ನಿಗಮ, ಬೋವಿ, ವಾಲ್ಮೀಕಿ ನಿಗಮ ಸೇರಿ ವಿವಿಧ ನಿಗಮಗಳ ಮೂಲಕ ಜಮೀನು ಇಲ್ಲದವರಿಗೆ ಜಮೀನುಗಳನ್ನು ಕೊಡಲಾಗುತ್ತಿತ್ತು. ಆದರೆ, ಭೂಮಿ ಕೊಟ್ಟಿಲ್ಲ; 39 ಸಾವಿರ ಕೋಟಿ ಮೀಸಲಿಟ್ಟರೂ ಎಲ್ಲ ನಿಗಮಗಳಿಗೆ ಸೇರಿ 500 ಕೋಟಿ ಕೊಡಲು ಇವರಿಗೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ದಲಿತರ ಹಣ ಗ್ಯಾರಂಟಿಗೆ ಕೊಡುವುದೇಕೆ?
ದಲಿತರಿಗೆ ಇಟ್ಟ ಹಣವನ್ನು ಅವರಿಗಲ್ಲದೇ ಇನ್ನೊಬ್ಬರಿಗೆ ಖರ್ಚು ಮಾಡುವುದಿಲ್ಲ ಎನ್ನುತ್ತಾರೆ. ಆದರೆ, ಗ್ಯಾರಂಟಿಗಳಿಗೆ ಬಳಸುವುದು ತಪ್ಪು. ಸಾರ್ವಜನಿಕವಾಗಿ ಕೊಡುವ ಗ್ಯಾರಂಟಿಗೆ ದಲಿತರಿಗೆ ಮೀಸಲಿಟ್ಟ ಹಣ ಬಳಸುವುದು ತಪ್ಪು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.
ದಲಿತ ಪದವೀಧರರಿಗೆ ಕೆಲಸ ಸಿಗುವಂತೆ ಮಾಡಿಲ್ಲ; ಕಾರ್ಖಾನೆ ಆರಂಭಿಸಲು ಸ್ವ ಉದ್ಯೋಗ ಆರಂಭಕ್ಕೆ ಸಾಲ ಮತ್ತಿತರ ಸೌಲಭ್ಯ ಕೊಟ್ಟಿಲ್ಲ ಎಂದು ತಿಳಿಸಿದರು. ಚಾಲನೆ ಕಲಿತವರಿಗೆ ಒಂದೇ ಒಂದು ಕಾರು ಕೊಡದವರು ಕಾಂಗ್ರೆಸ್ ಸರಕಾರ ಎಂದು ಆಕ್ಷೇಪ ವ್ಯಕ್ತಪಡಿಸಿದರು.